Friday, December 9, 2016

ಸಾವಿರ ಸರೋವರಗಳ ನಾಡು - “ಫಿನ್ಲ್ಯಾಂಡ್” !



ಹೆಸರೇ ಹೇಳುವಂತೆ ಇದು "ಸಾವಿರ ಸರೋವರಗಳ ನಾಡು". ಇಲ್ಲಿ ಪ್ರಕೃತಿ, ಸರೋವರಗಳ ರೂಪದಲ್ಲಿ ಬಿಂಬಿಸಲ್ಪಟ್ಟಿದೆ. ಅದುವೇ "ಫಿನ್ಲ್ಯಾಂಡ್". ಫಿನ್ಲ್ಯಾಂಡ್ ಯೂರೋಪ್ ನಲ್ಲಿರುವ ಒಂದು ದೇಶ. ವಿಸ್ತೀರ್ಣದಲ್ಲಿ ಸುಮಾರು ಮೂರು ಲಕ್ಷ square ಕಿಲೋಮೀಟರು ಇರುವ ಈ ದೇಶ, ಹೆಚ್ಚು-ಕಡಿಮೆ ೫೫ ಲಕ್ಷ ಜನ ಸಂಖ್ಯೆ ಹೊಂದಿದೆ. ಹೆಲ್ಸಿಂಕಿ ಇಲ್ಲಿನ ರಾಜಧಾನಿ. ಫಿನ್ಲ್ಯಾಂಡ್ ೧೯೧೭ ರಲ್ಲಿ ಸ್ವಾತಂತ್ರ ಪಡೆಯಿತು. ಫಿನ್ನಿಷ್ ಮತ್ತು ಸ್ವೀಡಿಷ್ ಇಲ್ಲಿನ ರಾಷ್ತ್ರೀಯ ಭಾಷೆಗಳಾದರೆ, ಸ್ಯಾಮಿ ಪ್ರಾದೇಶಿಕ ಭಾಷೆಯಾಗಿದೆ.

 ಫಿನ್ಲ್ಯಾಂಡನ್ನು ಏಕೆ "ಸಾವಿರ ಸರೋವರಗಳ ನಾಡು" ಎನ್ನುತ್ತಾರೆ? : ವಿಸ್ತೀರ್ಣಕ್ಕೆ ಹೋಲಿಸಿದಾಗ ಸುಮಾರು ಒಂದೂವರೆ ಲಕ್ಷ ಸರೋವರಗಳು ಈ ದೇಶದಲ್ಲಿ ಹೆಚ್ಚಿವೆ. ಪ್ರಪಂಚದ ಇನ್ನುಳಿದ ಯಾವುದೇ ದೇಶದಲ್ಲಿ ಈ ಅನುಪಾತ ನೋಡಲಸಾಧ್ಯ. ಇದರರ್ಥ ಹೆಚ್ಚು-ಕಡಿಮೆ ಇಲ್ಲಿನ ಪ್ರತೀ ಇಪ್ಪತ್ತಾರು ಜನರಿಗೆ ಒಂದು ಸರೋವರವಿದ್ದಂತೆ.  ಸರೋವರಗಳು ಸಾಮಾನ್ಯವಾಗಿ ಉತ್ತರದ Kuopio ಇಂದ ದಕ್ಷಿಣದ Lahtiವರೆಗೆ ಪಶ್ಚಿಮದ Tampere ಇಂದ ಉತ್ತರದ Punkaharju ಮತ್ತು ರಷ್ಯನ್ ಗಡಿವರೆಗೆ ಹರಡಿವೆ.

ಮತ್ತೊಂದು ವಿಸ್ಮಯದ ಸಂಗತಿಯೆಂದರೆ, ಸರೋವರಗಳೆಲ್ಲೆಲ್ಲಿವೆಯೋ ಅಲ್ಲೆಲ್ಲ ಸುಂದರ ಮರಗಳರಿರುವ ಕಾಡುಗಳು. ಫಿನ್ಲ್ಯಾಂಡನ ಕಾಡುಗಳಲ್ಲಿ pine, spruce ಮತ್ತು birch ಮರಗಳಷ್ಟೇ ಕಾಣಸಿಗುತ್ತವೆ. ಬಹುಶಃ ಪ್ರಪಂಚದಲ್ಲಿ ಫಿನ್ಲ್ಯಾಂಡ್ ಒಂದೇ ದೇಶದಲ್ಲಿ ಮಾತ್ರ ಮರಗಳು ಕಾಡಿಗೆ ಮಾತ್ರವಲ್ಲದೆ, ಸರೋವರಗಳಿಗೂ ಸೀಮಿತವಾಗಿರುವುದನ್ನು ಕಾಣಬಹುದು. ಪ್ರಪಂಚದಲ್ಲಿ ಅತೀ ಹೆಚ್ಚು ಮರಗಳಿರುವ ರಾಷ್ಟ್ರಗಳಲ್ಲಿ ಫಿನ್ಲ್ಯಾಂಡ್ ಮುಖ್ಯವಾದದ್ದು (ವಿಸ್ತೀರ್ಣ ಮತ್ತು ಮನುಷ್ಯರ ಅನುಪಾತಕ್ಕನುಗುಣವಾಗಿ). ಫಿನ್ನಿಷ್ ಸೌಂದರ್ಯ ಸರೋವರ, ಮರಗಳಲ್ಲೊಂದೇ ಅಲ್ಲದೆ ಇಲ್ಲಿನ ಮರದ ದಿನ್ನೆಗಳಿಂದ ಮಾಡಿದ ಮನೆಗಳು, ಬೇಸಿಗೆಯ ಕುಟೀರಗಳು, ದೋಣಿಗಳು, ಕರಕುಶಲ ವಸ್ತುಗಳೂ ಎತ್ತಿ ತೋರುತ್ತವೆ.

ಸಾರ್ವಜನಿಕ ಪ್ರವೇಶ ಎಲ್ಲಾ ಸರೋವರ, ಕಾಡು ಮತ್ತು ಹೊರ ಪ್ರದೇಶಗಳಿಗೆ ನೀಡಿರುವದರಿಂದ, ಇದನ್ನು "everyman's rights" ಎಂದು ಕರೆಯುತ್ತಾರೆ.  ಫಿನ್ಲ್ಯಾಂಡ್ ನ ಸೌಂದರ್ಯವನ್ನು ಸವಿಯಲು ಮತ್ತೊಂದು ಆಯ್ಕೆಯೆಂದರೆ Kuopioಗೆ ಭೇಟಿ ಕೊಡುವುದು. ಇಲ್ಲಿನ ೨೪೬ ಅಡಿ ಎತ್ತರದ Puijo ಟವರ್ ಫಿನ್ಲ್ಯಾಂಡ್ ನ್ನು ವಸ್ತು ಸಂಗ್ರಹಾಲಯದ ವಸ್ತುವಿನಂತೆ ಪ್ರತಿಬಿಂಬಿಸುತ್ತದೆ. ಹಸಿರು ಕಾರ್ಪೆಟ್ಟಿನ ಮೇಲೆ ಗಾಜಿನಂತೆ ಸರೋವರಗಳು ಕಾಣುತ್ತವೆ. ಇದೊಂದು ಕಣ್ಣಿಗೆ ಮುದ ನೀಡುವ ಸ್ಥಳ.

ಇನ್ನು ವಿಸ್ತೀರ್ಣದ ಪ್ರಕಾರ ಸೂರ್ ಸೈಮಾ ಸರೋವರ ಅತೀ ದೊಡ್ಡದಾಗಿದೆ. ಇದು ಫಿನ್ಲ್ಯಾಂಡಿನ ಆಗ್ನೇಯ ಭಾಗದಲ್ಲಿದೆ. ಇದರ ವಿಸ್ತೀರ್ಣ ಸುಮಾರು ೪೪೦೦ ಸ್ಕ್ವೇರ್ ಕಿಲೋಮೀಟರ್ಗಳು. ಇದು ಯೂರೋಪಿನ ನಾಲ್ಕನೇ ದೊಡ್ಡ ಸರೋವರ ಕೂಡ. Päijänne ಸರೋವರ ಎರಡನೇ ದೊಡ್ಡ ಸರೋವರವಾಗಿದ್ದು, Inari ಮತ್ತು Pielinen ಸರೋವರಗಳು ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿವೆ.

ಇನ್ನು ಈ ಪ್ರಕೃತಿ ಸೌಂದರ್ಯಕ್ಕೆ ಮುಖ್ಯ ಕಾರಣ, ಭೂಮಂಡಲದಲ್ಲಿ ಫಿನ್ಲ್ಯಾಂಡ್ ಇರುವ ಸ್ಥಳ. ಇದು ಬೋರಿಯಲ್ ವಲಯಕ್ಕೆ ಸೇರಲ್ಪಡುತ್ತದೆ. ಇಲ್ಲಿನ ಬೇಸಿಗೆ ಸಾಮಾನ್ಯದ್ದಾಗಿರುತ್ತದೆಯಾದರೂ, ಚಳಿಗಾಲ ಮಾತ್ರ ಘನ ಘೋರ. ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಹವಾಮಾನ ವ್ಯತ್ಯಾಸ ಬಹಳಷ್ಟಿದೆ. ಫಿನ್ಲ್ಯಾಂಡ್ ಅಟ್ಲಾಂಟಿಕ್ ಸಮುದ್ರಕ್ಕೆ ಬಹಳ ಹತ್ತಿರವಿದ್ದು ಇಲ್ಲಿನ ಕೊಲ್ಲಿಗಳಿಂದಾಗಿ ಬೆಚ್ಚನೆಯ ಗಾಳಿ ಬೀಸುತ್ತಿರುತ್ತದೆ. ದಕ್ಷಿಣ ಫಿನ್ಲ್ಯಾಂಡಿನಲ್ಲಿ ಸಾಮಾನ್ಯವಾಗಿ ನೂರು ದಿನಗಳ ಕಾಲ ಅತೀ ಚಳಿಗಾಲವಿರುತ್ತದೆ. ಹೆಲ್ಸಿನ್ಕಿಯಲ್ಲಿ ಸಾಮಾನ್ಯವಾಗಿ ನವೆಂಬರ್ ಕೊನೆಯಿಂದ ಮಾರ್ಚ್ ತನಕ ಹಿಮ ಬೀಳುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ -೩೦ ಡಿಗ್ರಿ ಸಿ ತನಕ ಚಳಿ ಇರುತ್ತದೆ. ಉತ್ತರ ಫಿನ್ಲ್ಯಾಂಡಿನಲ್ಲಿ ಸಾಮಾನ್ಯವಾಗಿ ೨೦೦ ದಿನಗಳ ಕಾಲ ಚಳಿಗಾಲವಿರುತ್ತದೆ. ಇಲ್ಲಿ ಅಕ್ಟೋಬರ್ ಇಂದ ಮೇ ಕೊನೆಯ ತನಕ ಹಿಮ ಬೀಳುತ್ತದೆ.

ಪ್ರಯಾಣಿಕರಿಗೆ ಫಿನ್ಲ್ಯಾಂಡ್ ಒಂದು ಅದ್ಬುತ ಅನುಭವ ಕೊಡುವಂತಹ ದೇಶ. ಪ್ರಕೃತಿ ಸೌಂದರ್ಯದ ತವರೂರು. ಬೇಸಿಗೆ ಅಂತಹ ಹೆಚ್ಚಾಗಿಲ್ಲದೆ ಇರುವುದರಿಂದ ಹಲವಾರು ಕ್ರೀಡೇಗಳಿಗೆ ಕೂಡ ಆಸ್ಪದವಿದೆ. ದೂರದ ದೇಶದ ಪ್ರಯಾಣ ನಿಮ್ಮ ಕನಸಾಗಿದ್ದರೆ, ಫಿನ್ಲ್ಯಾಂಡನ್ನು ನಿಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು.

This article was published in TimesKannada news paper http://timeskannada.com/?p=10070


Monday, November 21, 2016

ಕಣ್ಮನ ಸೆಳೆಯುವ, ಕಾಮನಬಿಲ್ಲಿನ ರಹಸ್ಯದ ಹಿಂದೆ ... !!


ಪ್ರತಿಯೊಬ್ಬ ಮನುಷ್ಯನಿಗೂ ಅತೀ ಮಧುರ ನೆನಪುಗಳೆಂದರೆ ಬಾಲ್ಯದ ದಿನಗಳು. ಎಲ್ಲರ ಬಾಲ್ಯವೂ ಮರೆಯಲಾಗದ ಜೀವನದ ಅಂಗ. ಬಾಲ್ಯವೆಂದರೆ ವರ್ಣರಂಜಿತ. ಹೀಗೆ ಬಾಲ್ಯದಲ್ಲಿ ಕಿವಿ ತುಂಬಿದ ಹಾಡುಗಳಲ್ಲಿ "ಕಾಮನ ಬಿಲ್ಲಿನ ಮೇಲೆ ಓಡುತ ಸಾಗುವ ರೈಲಿದೆ.. ಜಿಗಿ ಜಿಗಿ ಜಿಗಿ ಜೂ ... ಕುಕ್ಕೂ.. " ಕೂಡ ಒಂದು. ಬಾಲ್ಯಕ್ಕೂ- ಕಾಮನಬಿಲ್ಲಿಗೂ ಅವಿನಾಭಾವ ಸಂಬಂಧ. ಅದೆಷ್ಟೋ ದಿನಗಳು ಕಾಮನಬಿಲ್ಲು ಕಟ್ಟಲು ಕಾದಿದ್ದಿದೆ. ಕಾಮನಬಿಲ್ಲು ಕಟ್ಟಿದಾಗ ಕುಣಿದು ಕುಪ್ಪಳಿಸಿ ಪ್ರಪಂಚದ ಅದ್ಭುತಗಳನ್ನು ಕಂಡಷ್ಟು ಖುಷಿಪಟ್ಟಿದ್ದಿದೆ. ಬೆಳೆಯುವಾಗ ಅನೇಕ ಭಾರಿ ಈ ಪ್ರಕೃತಿ ವಿಸ್ಮಯದ ಹಿಂದೆ ಏನಿದೆ ಎಂದು ಮನಸಿನಲ್ಲಿ ನೂರೆಂಟು ಪ್ರಶ್ನೆಗಳು ಮೂಡಿದ್ದಿದೆ. ಏನಿರಬಹುದು ಈ ಕಾಮನ ಬಿಲ್ಲಿನ ರಹಸ್ಯ ?


ಬೆಳಕು (ಬಿಳಿ) ಹಲವಾರು ಬಣ್ಣಗಳ (ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲಿ, ವಜ್ರ ನೀಲಿ ಮತ್ತು ನೇರಳೆ) ಮಿಶ್ರಣ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಆದ್ದರಿಂದಲೇ ಪ್ರಿಸಂನಲ್ಲಿ ನಾವು ಬಿಳಿ ಬೆಳಕನ್ನು ಹರಿ ಬಿಟ್ಟಾಗ, ಏಳು ಬಣ್ಣಗಳಾಗಿ ಹೊರ ಹೊಮ್ಮುತ್ತದೆ.  ಹಾಗಾದರೆ ಬಿಳಿ ಬಣ್ಣದ ಬಗ್ಗೆ ತಿಳಿಯುವ ಮುನ್ನ "ಪ್ರಿಸಂ"ನಲ್ಲಿ ಬಣ್ಣಗಳು ಬೇರೆ ಬೇರೆಯಾಗಿ ಹೊರ ಹೊಮ್ಮಲು ಏನು ಕಾರಣ?


"ಪ್ರಿಸಂ" ಒಂದು ತ್ರಿಭುಜಾಕೃತಿಯ ಗಾಜು ಅಥವಾ ಪ್ಲಾಸ್ಟಿಕ್ ತುಂಡು. ಬಣ್ಣಗಳು ಬೇರೆ ಬೇರೆಯಾಗಲು ಗಾಜಿನ ವಕ್ರೀಕರಣ ಸೂಚಿ (Refractive Index ಅಥವಾ RI ) ಕಾರಣ. ಪ್ರತಿಯೊಂದು ವಸ್ತುವಿಗೂ ಬೇರೆ ಬೇರೆ RI ಗಳಿರುತ್ತವೆ. ಗಾಳಿ ಮತ್ತು ಗಾಜಿನ RI ಗಳು ಬೇರೆ ಬೇರೆ ಯಾಗಿರುವದರಿಂದ ಬೆಳಕು ಬಾಗಲು (bend) ಕಾರಣವಾಗುತ್ತವೆ. ಈ ಬಾಗುವ ಕೋನವು (Refraction Angle) ಬೇರೆ ಬೇರೆ ತರಂಗಗಳ ಬೆಳಕಿನ ಕಿರಣಗಳಿಗೆ ಬೇರೆ ಬೇರೆಯದ್ದಾಗಿರುತ್ತದೆ. ಬೆಳಕು ಪ್ರಿಸಂನ ಎರಡು ಮುಖಗಳ ಮೂಲಕ ಹರಿದಾಗ ಬೇರೆ ಬೇರೆ ಬಣ್ಣಗಳು ಬೇರೆ ಬೇರೆ ಪ್ರಮಾಣದಲ್ಲಿ ಬಾಗಲ್ಪಡುತ್ತವೆ. ಆದುದರಿಂದಲೇ ಪ್ರಿಸಂನಿಂದ ಸಣ್ಣದೊಂದು ಕಾಮನಬಿಲ್ಲು ಹೊರಹೊಮ್ಮುತ್ತದೆ.  

ಕಾಮನಬಿಲ್ಲಿನ ರಹಸ್ಯ - ಕಾಮನಬಿಲ್ಲಿನ ಸೃಷ್ಟಿಯಲ್ಲಿ ಗಾಳಿಯಲ್ಲಿರುವ ಮಳೆ ಹನಿಗಳು ಚಿಕ್ಕ ಚಿಕ್ಕ ಪ್ರಿಸಂಗಳಾಗಿ ವರ್ತಿಸುತ್ತವೆ. ಮಳೆ ಹನಿಗಳ ಗಾತ್ರ ಬೇರೆಯದ್ದಾದರೂ, ನಿರ್ವಹಿಸುವ ಕೆಲಸ ಮಾತ್ರ ಪ್ರಿಸಂನದ್ದಾಗಿರುತ್ತದೆ. ಬಿಳಿ ಬೆಳಕು ನೀರಿನ ಹನಿಯೊಳಗೆ ಹರಿದು ಏಳು ಬಣ್ಣಗಳಾಗಿ ಹೊರ ಹೊಮ್ಮುತ್ತದೆ. ಕಾಮನಬಿಲ್ಲು ಮೂಡುವ ಕಾರ್ಯದಲ್ಲಿ ಪ್ರತಿಯೊಂದು ಮಳೆ ಹನಿಯೂ ಕೂಡ ಪ್ರಿಸಂನ ಕೆಲಸ ನಿರ್ವಹಿಸುತ್ತದೆ. ಮಳೆ ಹನಿಯೊಳಗೆ ಬರುವ ಮತ್ತು ಹೊರಹೊಮ್ಮುವ ಕೋನವು ಕೆಂಪುಬಣ್ಣಕ್ಕೆ ೪೨ ಡಿಗ್ರಿಯಿದ್ದರೆ, ನೇರಳೆ ಬಣ್ಣಕ್ಕೆ ೪೦ ಡಿಗ್ರಿಯಾಗಿರುತ್ತದೆ. ಇನ್ನುಳಿದ ಬಣ್ಣಗಳ ಕೋನಗಳು ಇವೆರಡರ ನಡುವಿನಲ್ಲಿರುತ್ತವೆ. 
ಹಲವಾರು ಬಾರಿ ನಾವು ಎರಡೆರಡು ಕಾಮನಬಿಲ್ಲನ್ನು ನೋಡಿದ್ದಿದೆ. ಮಳೆ ಹನಿಗಳ ಒಳಗೆ ಎರಡು ಪ್ರತಿಬಿಂಬಗಳುಂಟಾದಾಗ ಇವು ಹುಟ್ಟುತ್ತದೆ. ಮಳೆ ಹನಿಗಳ ಗಾತ್ರ ಸರಿಯಾಗಿರಬೇಕಷ್ಟೆ.  


ವೈಜ್ಞಾನಿಕವಾಗಿ ಏನೇ ಕಾರಣಗಳಿದ್ದರೂ, ಕಾಮನಬಿಲ್ಲು ಬಣ್ಣಗಳ ಲೋಕವನ್ನೇ ಸೃಷ್ಟಿ ಮಾಡುವದಂತೂ ನಿಜ. ಭೂಮಿಯಿಂದ ಬಾನಿಗೆ ಏಣಿ ಹಾಕಿದ ಭಾವನೆ. 

This article was published in TimesKannada news paper http://timeskannada.com/?p=9321


Wednesday, November 2, 2016

ಮೋಹಕ ಬಣ್ಣದ, ಪುಷ್ಪ ಲೋಕದ ಸುಂದರಿ - ಮುತ್ತುಗ



ನಮ್ಮಲ್ಲಿ ಅನೇಕರಿಗೆ "ಮುತ್ತುಗ" ಅಥವಾ "ಮತ್ತುಗ" ಹೆಸರೇ ಹೊಸದು. ಮಲೆನಾಡಿನವರಿಗೆ ಇದರ ಕಲ್ಪನೆ ಸ್ವಲ್ಪ ಬರಬಹುದು. ಆದರೆ ಮುತ್ತುಗದ ಹೂ ಭಾರತದ ಎಲ್ಲ ದಿಕ್ಕುಗಳಲ್ಲೂ ಕಾಣಲ್ಪಡುತ್ತದೆ. ಬೆಂಗಳೂರಿನಲ್ಲೂ ಹಲವಾರು ಕಡೆ ಮುತ್ತುಗದ ಹೂ ಕಾಣಸಿಗಬಹುದು. ಹಾಗಾದರೆ "ಮುತ್ತುಗ"ದ ಹೂ ಹೇಗಿರಬಹುದು? 

ಮುತ್ತುಗ ಉಷ್ಣವಲಯ ಮತ್ತು ಉಪೋಷ್ಣವಲಯಗಳಲ್ಲಿ ಕಾಣ ಸಿಗುವಂತಹ ಹೂ. ಸಾಮಾನ್ಯವಾಗಿ ಇದು ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್, ಇಂಡೋನೇಷ್ಯಾ ಮತ್ತು ಆಫ್ರಿಕಾದ ಕೆಲ ದೇಶಗಳಲ್ಲಿ ಕಂಡು ಬರುತ್ತದೆ. ಕೇಸರಿ ಬಣ್ಣದ ಈ ಚೆಲುವೆಗೆ ಕಾಡಿನ ಬೆಂಕಿ ಮತ್ತು ಬಾಸ್ಟರ್ಡ್ ಟೀಕ್ ಎಂತಲೂ ಕರೆಯುತ್ತಾರೆ. ಸಾಮಾನ್ಯವಾಗಿ ಇಂಗ್ಲೀಷನಲ್ಲಿ "Parrot Tree" ಎಂದು ಕರೆಲ್ಪಡುವ ಮುತ್ತುಗದ ಮರಕ್ಕೆ ಸಸ್ಯಶಾಸ್ತ್ರೀಯ ಕುಟುಂಬ ಹಾಗೂ ವಿಂಗಡನೆ ಈ ಕೆಳಗಂಡಂತಿದೆ: 

ವೈಜ್ಞಾನಿಕ ವಿಂಗಡನೆ(Scientific classification)
Kingdom: Plantae
Order: Fabales
Family: Fabaceae
Genus: Butea
Species: B. monosperma

Binomial name
Butea monosperma

ಭಾರತಕ್ಕೂ- ಮತ್ತುಗಕ್ಕೂ ಅವಿನಾಭಾವ ಸಂಬಂಧ:

ಹಿಂದೂ ಪುರಾಣದ ಪ್ರಕಾರ ಮತ್ತುಗದ ಮರವು ಅಗ್ನಿ ದೇವನ ರೂಪ. ಪಾರ್ವತಿ ಮತ್ತು ಪರಶಿವನ ಏಕಾಂತಕ್ಕೆ ಭಂಗಪಡಿಸದ್ದಕ್ಕೆ ಅಗ್ನಿ ದೇವನಿಗೆ ಪಾರ್ವತಿ ಕೊಟ್ಟ ಶಾಪವಿದು ಎಂಬ ನಂಬಿಕೆಯಿದೆ. 

ಮುತ್ತುಗದ ಹೂವಿಗೂ ವಸಂತಕ್ಕೂ ಅವಿನಾಭಾವ ಸಂಬಂಧ. ಸಾಮಾನ್ಯವಾಗಿ ಜನವರಿ ಅಂತ್ಯ - ಫೆಬ್ರುವರಿ ಸಮಯದಲ್ಲಿ ಹೂ ಬಿಡುವ ಕಾಲ. ಪಶ್ಚಿಮ ಬಂಗಾಳದಲ್ಲಿ ಇದನ್ನು ಪಲಶಿ ಎಂದು ಕರೆಯುತ್ತಾರೆ. ರಾಬಿನ್ದ್ರನಾಥ್ ಠಾಗೋರ್ರವರು, ಅವರ ಹಲವಾರು ಪದ್ಯಗಳಲ್ಲಿ ಮತ್ತುಗದ ಹೂವಿನ ಉಲ್ಲೇಖ ಕೊಟ್ಟಿದ್ದಾರೆ. ಜಾರಖಾಂಡ್ ರಾಜ್ಯದಲ್ಲಿ ಮತ್ತುಗಕ್ಕೂ-ಜನಪದಕ್ಕೂ ಹತ್ತಿರದ ಸಂಬಂಧ. ಈ ರಾಜ್ಯದ ಹಲವಾರು  ಜಾನಪದ ಕಥೆಗಳಲ್ಲಿ ಕಾಡಿನ ಬೆಂಕಿ ಎಂದು ಮುತ್ತುಗದ ಉಲ್ಲೇಖವಿದೆ. ಇಲ್ಲಿನ ಕಾಡುಗಳು ಸೌಂದರ್ಯಯುತವಾಗಿ ಕಾಣಿಸುವುದೇ ಬೇರೆಲ್ಲ ಮರಗಳು ಬರಿದಾದಾಗ, ಮುತ್ತುಗ ಮೈ ತುಂಬಿದಾಗ. ಮುತ್ತುಗ ಜಾರಖಾಂಡ್ ರಾಜ್ಯ ಹೂ ಆಗಿದೆ. ತೆಲಂಗಾಣ ರಾಜ್ಯದಲ್ಲಿ ಇದು ಶಿವರಾತ್ರಿ ಪೂಜೆಯಲ್ಲಿ ಉಪಯೋಗಿಸಲ್ಪಡುವ ವಿಶೇಷ ಹೂ. ಕರ್ನಾಟಕದಲ್ಲಿ ಇದನ್ನು ರಥಸಪ್ತಮಿಯ ಪೂಜೆಗಳಲ್ಲಿ ವಿಶೇಷವಾಗಿ ಉಪಯೋಗಿಸಲಾಗುತ್ತದೆ. ಕೇರಳದಲ್ಲಿ ಪಲಸು ಎಂದು ಕರೆಯಲ್ಪಡುವ ಈ ಹೂವು ಅಗ್ನಿ ಪೂಜೆಗಳಲ್ಲಿ ವಿಶೇಷವಾಗಿ ಬಳಸಲಾಗುತ್ತದೆ. 

ಮತ್ತುಗದ ಉಪಯೋಗಗಳು:

ಮತ್ತುಗ ಹಲವಾರು ವಿಧಗಳಲ್ಲಿ ಉಪಯೋಗಿಸಬಹುದು. ಮರದ ರೂಪದಲ್ಲಿ, ಅಂಟಿನ ರೂಪದಲ್ಲಿ, ಬಣ್ಣದ ರೂಪದಲ್ಲಿ, ಮೇವಿನ ರೂಪದಲ್ಲಿ ಹೀಗೆ ಹತ್ತು ಹಲವಾರು ವಿಧಗಳಲ್ಲಿ.

ಆಯುರ್ವೇದದಲ್ಲಿ ಮತ್ತುಗ:

ಆಯುರ್ವೇದದಲ್ಲಿ ಮತ್ತುಗದ ಹೂವು, ಬೀಜ, ಅಂಟು ಮತ್ತು ಎಲೆಗಳನ್ನು ಬಳಸಿ ಔಷಧಿಗಳನ್ನು ತಯಾರಿಸಾಲಾಗುತ್ತದೆ. ಹೂವುಗಳಲ್ಲಿ  glucosides, butin, neteroside ಮತ್ತು butrin ಅಂಶ ಜಾಸ್ತಿ ಇದ್ದರೆ, ಬೀಜಗಳಲ್ಲಿ moodooga oil ಅಥವಾ kino-tree oil ಅಂಶ ಜಾಸ್ತಿ ಇದ್ದು, ಹಳದಿ ಬಣ್ಣದ ಎಣ್ಣೆ ಇದಾಗಿರುತ್ತದೆ. ಈ ಎಣ್ಣೆಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ಮರದಿಂದ ಬರುವ ಅಂಟಿನಲ್ಲಿ gallic acid ಮತ್ತು tannic acid ಜಾಸ್ತಿ ಇದ್ದಿರುತ್ತದೆ. ಇದರ ಎಲೆಗಳನ್ನು ಟಾನಿಕ್ ಮತ್ತು ಕಾಮೋತ್ತೇಜಕಗಳ ಉತ್ಪಾದನೆಗೆ ಬಳಸುತ್ತಾರೆ. ಇದಲ್ಲದೆ ರಕ್ತ ಹೆಪ್ಪುಗಟ್ಟುವಿಕೆಗೆ ಮತ್ತುಗದ ಎಲೆಗಳು ಉಪಯೋಗಿಸಲ್ಪಡುತ್ತವೆ. 

ಮತ್ತುಗ ಮರದ ಉಪಯೋಗಗಳು ಮೇಲಿನಂತಾದರೆ, ಮಾನವ ಶರೀರದ ಸಮಸ್ಯೆಗಳಿಗನುಗುಣವಾಗಿ ಯಾವ ಉಪಯೋಗ ಎಂಬುದು ಕೆಳಗಿನಂತಿದೆ: 
೧. ಅತಿಸಾರ ಮತ್ತು ಬೇದಿ 
೨. ಹೊಟ್ಟೆಹುಳು 
೩. ಸಕ್ಕರೆ ಕಾಯಿಲೆ 
೪. ಗಂಟಲು ನೋವು
೫. ಚರ್ಮ ರೋಗ 
೬. ಬಿಳಿಸೆರಗು 
೭. ಜಲಸಂಚಯನ 

ಆಯುರ್ವೇದೀಯವಾಗಿ ಮತ್ತುಗ ಎಷ್ಟೇ ಸಹಾಯಕವಾದ ಔಷದಿಯಾದರೂ ಕೂಡ, ವೈದ್ಯರ ಸಲಹೆಯಿಲ್ಲದೆ ತೆಗೆದುಕೊಳ್ಳುವಂತಿಲ್ಲ. ಸೂಕ್ತ ಮಾಹಿತಿ ಮತ್ತು ಪ್ರಮಾಣಕ್ಕಾಗಿ ಆಯುರ್ವೇದೀಯ ವೈದ್ಯರ ಸಲಹೆ ಅತ್ಯಗತ್ಯ. 

 ಮತ್ತುಗ ಮೈ ತುಂಬಿದರೆ ಎಲ್ಲೆಲ್ಲೂ ರಕ್ತ ವರ್ಣ. ಸೃಷ್ಟಿ ದೇವೆತೆಗೆ ಸಿರಿಯುಡಿಸಿದ ಭಾವ. "ಕೆಂಪಾದವೋ ಎಲ್ಲ ಕೆಂಪಾದವೋ ... " ಎಂಬ ಕವಿ ವಾಣಿ ಮನ ತುಂಬುತ್ತದೆ. ಎಷ್ಟೇ ಸೌಂದರ್ಯವಿರಲಿ, ಔಷದೀಯ ಗುಣಗಳಿರುವ ಮರಗಳಿರಲಿ, ಭಾರತದಲ್ಲಿ ಮತ್ತು ಭಾರತೀಯ ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಮಟ್ಟುಗದಂತಹ ನೂರಾರು ಗಿಡ ಮರಗಳು ವಿನಾಶದಂಚಿನಲ್ಲಿವೆ. ಪರಿಸರ ಪ್ರೀತಿ ಮತ್ತು ಪರಿಸರ ಬೆಳೆಸುವ ಅರಿವು-ಉದ್ದೇಶ ನಮ್ಮ ಸಾಮಾನ್ಯ ಜನರಲ್ಲಿ ಮೂಡಬೇಕಿದೆ. ಇದರಿಂದಾಗಿ ಮತ್ತುಗದಂತಹ ಹಲವಾರು ವಿನಾಶದಂಚಿನ ಸಸ್ಯ ಸಂಕುಲವನ್ನು ಉಳಿಸಿಕೊಳ್ಳಬಹುದು. 

This article was published in TimesKannada news paper

Monday, September 19, 2016

ನಶಿಸಿ ಹೊಯ್ತು ಕರ್ನಾಟಕದ "ಬಳೆಗಾರ ಚೆನ್ನಯ್ಯ" ಸಂಸ್ಕೃತಿ...



ಕರ್ನಾಟಕ, ಹಲವಾರು ಭಾರತೀಯ ಸಂಸ್ಕೃತಿಗಳನ್ನು ಕಾಪಾಡಿಕೊಂಡು ಬಂದಂತಹ ರಾಜ್ಯಗಳಲ್ಲಿ ಒಂದು. ಅವುಗಳಲ್ಲಿ ರಂಗೋಲಿ ಇಡುವುದು, ಮಹಿಳೆಯರ ಮೂಗುತಿ, ಯಕ್ಷಗಾನ, ಕೋಲಾಟ ಮುಂತಾದವುಗಳು ಮುಖ್ಯವಾದವುಗಳು. ಮದುವೆ-ಮುಂಜಿಗಳು ಬಂದರೆ ಬಳೆ ಇಡುವುದು ನಮ್ಮ ಹೆಮ್ಮೆಯ ಸಂಸ್ಕೃತಿ ಕೂಡ. ಇತ್ತೀಚಿನ ದಿನಗಳಲ್ಲಿ ಆಧುನಿಕತೆಯಿಂದಾಗಿ ಮಹಿಳೆಯರು ಪಟ್ಟಣಕ್ಕೆ ಹೋಗಿ ಬಳೆ ಇಟ್ಟು ಬಂದರೂ, ಹಿಂದಿನ "ಬಳೆಗಾರ" ಸಂಸ್ಕೃತಿ ಮರೆಯಲು ಸಾಧ್ಯವೇ? ಮಹಿಳೆಯರೇ ಹಾಗೆ. ಆಭರಣ ಪ್ರಿಯರು. ಇದು ಇಂದು-ನಿನ್ನೆಯದಲ್ಲ. ಅನಾದಿಕಾಲದಿಂದಲೂ ಆಕೆ ಸರ್ವಾಭರಣ ಭೂಷಿತೆ. ಈಗ ಕಾಲ ಬದಲಾಗಿದೆ, ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯವಿದೆ. ಆಕೆ ತನಗೆ ಬೇಕಾದ್ದನ್ನು ಪಟ್ಟಣಕ್ಕೆ ಹೋಗಿ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾಳೆ. ಆದರೆ ಹಿಂದಿನ ಕಾಲ ಹೀಗಿರಲಿಲ್ಲ. ಹಳ್ಳಿಯ ಮಹಿಳೆಯರಿಗೆ ಮನೆಯಿಂದ ಹೊರ ಬರುಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಅಂತಹ ಕಾಲದಲ್ಲಿ ಬಳೆಗಾರ ಸಂಸ್ಕೃತಿ ಹೆಚ್ಚು ಪ್ರಚಲಿತವಾಗಿತ್ತು. 

ಈ "ಬಳೆಗಾರ"ರಿಗೆ ಸಮಾಜದಲ್ಲಿ ವಿಶೇಷ ಸ್ಥಾನವಿದ್ದಿತ್ತು. ಬಳೆಯನ್ನು ಹೊತ್ತು ಊರೂರು ತಿರುಗುವುದು ಇವರ ಉದ್ಯೋಗ. ಹೆಚ್ಚಿನ ಬಳೆಗಾರರಿಗೆ ಜೀವನಾಂಶ ಕೂಡ  ಇದೇ ಆಗಿರುತ್ತಿತ್ತು. ಆಗಿನ ಕಾಲದಲ್ಲಿ ಸಾಮಾನ್ಯವಾಗಿ ಇದು ವಂಶಪಾರಂಪರ್ಯವಾಗಿ ಮುಂದುವರೆಲ್ಪಡುತ್ತಿತ್ತು. ಮನುಷ್ಯರಿಗೆ, ಮಾನವೀಯತೆಗೆ ಬೆಲೆ ಕೊಡುತ್ತಿದ್ದ ಕಾಲವದು. ಹೀಗಾಗಿ ಒಬ್ಬ ಬಳೆಗಾರ ಒಮ್ಮೆ ಬಳೆ ಮಾರಲು ಹೊರಟರೆ, ಅವನು ಪುನಃ ಮನೆಗೆ ವಾಪಸಾಗಲು ಹಲವಾರು ದಿನಗಳಾಗುತ್ತಿದ್ದವು. ಅಲ್ಲಿಯವರೆಗೂ ಮನೆ ಮನೆಗೆ ತಿರುಗುವ ಬಳೆಗಾರರಿಗೆ, ಊಟ ಒಬ್ಬರ ಮನೆಯೊಡತಿ ನೀಡಿದರೆ, ವಸತಿ ಇನ್ನೊಂದು ಮನೆಯೊಡೆಯ ನೀಡುತ್ತಿದ್ದರು. ಇದೊಂದು ಸಂಸ್ಕೃತಿಯೊಂದೇ ಅಲ್ಲದೆ, ಸೌಹಾರ್ದ ಮತ್ತು ಮಾನವೀಯ ಸಮಾಜದ ಉದಾಹರಣೆಯನ್ನು ಎತ್ತಿ ತೋರುತ್ತದೆ. 

ಇವಿಷ್ಟೂ ಬಳೆಗಾರರ ಬಗ್ಗೆಯಾದರೆ, ಬಳೆಗಾರರ ದಿನಚರಿ ಹೇಗಿರುತ್ತಿತ್ತು? ಬೆಳಿಗ್ಗೆ ಎದ್ದು ಮನೆಯಲ್ಲಿ ತಿಂಡಿ ಮುಗಿಸಿ, ಭಾರದ ಬಳೆ ಗಂಟನ್ನು ಎತ್ತಿ ಹೊರಡುವ ಬಳೆಗಾರರು ಪ್ರತಿಯೊಂದು ಮನೆ ಎದುರು ನಿಂತು "ಅಮ್ಮಾ ಬಳೆ ಬೇಕಾ" ಎನ್ನುತ್ತಿದ್ದಿದು ಪದ್ದತಿ. ಹಿಂದಿನ ಕಾಲದಲ್ಲಿ ಸಂಚಾರಿ ವ್ಯವಸ್ಥೆ ಇಲ್ಲವಾಗಿರುತ್ತಿದ್ದರಿಂದ ಸಾಮಾನ್ಯವಾಗಿ ಎಲ್ಲಾ ಮನೆಯ ಹೆಣ್ಣು ಮಕ್ಕಳು ಬಳೆ ಕೊಳ್ಳುತ್ತಿದ್ದರು. ಕೆಲ ಬಳೆಗಾರರು ಬರೀ ಬಳೆಯೊಂದೇ ಅಲ್ಲದೆ ಅದರ ಜೊತೆ ಮಕ್ಕಳ ಆಟಿಕೆ, ಸರ, ಕಿವಿಯೋಲೆ, ತಲೆಗೆ ಹಾಕುವ ಕ್ಲಿಪ್, ಪಟ್ಟಿ ಹೀಗೆ ವಿಧ ವಿಧ ವಸ್ತುಗಳನ್ನು ಹೊತ್ತು ಬರುತ್ತಿದ್ದರು. ಬಳೆಗಾರ ಬಂದರೆ ಮಕ್ಕಳಿಗಂತೂ ಸಂಭ್ರಮವೋ ಸಂಭ್ರಮ. ಅದೂ ಅಪ್ಪ ಇಲ್ಲದ ಸಮಯದಲ್ಲಿ ಬಳೆಗಾರ ಬಂದರೆ ಸ್ವರ್ಗ. ಯಾಕೆಂದರೆ ಅಮ್ಮ ಕೂಡಿಟ್ಟ ಅಲ್ಪ ಸ್ವಲ್ಪ ದುಡ್ಡಿಂದ ಕಂಡದ್ದೆಲ್ಲ ಹಠ ಬಿದ್ದು ಕೊಡಿಸಿಕೊಳ್ಳಬಹುದಲ್ಲ. ಮನೆಗೆ ಬಂದ ಬಳೆಗಾರನಿಗೆ ದಣಿವಾರಿಸಿಕೊಳ್ಳಲು ಪಾನೀಯ ಕೊಟ್ಟ ಮನೆಯೊಡತಿ ಬಳೆ ನೋಡಲು ಕೂರುತ್ತಿದ್ದಳು. ತನಗಿಷ್ಟವಾದ ಬಳೆ ಮತ್ತು ಮಕ್ಕಳಿಗೆ ಬೇಕಾದ್ದು ತೆಗೆದುಕೊಂಡ ನಂತರ ಹಣ ನೀಡಿ, ಬಳೆಗೆ ಅರಿಶಿನ-ಕುಂಕುಮ ಹಾಕಿ ನಮಸ್ಕರಿಸಿ ಕಳಿಸುವುದು ನಮ್ಮ ಸಂಸ್ಕೃತಿ. ಯಾಕೆಂದರೆ ನಾವು ನಿಸರ್ಗವನ್ನು ವಿವಿಧ ರೀತಿಯಲ್ಲಿ ಪೂಜಿಸುತ್ತೇವಲ್ಲವೇ? 

ಇದಲ್ಲದೇ, ಸಾಮಾನ್ಯವಾಗಿ ಮದುವೆ-ಮುಂಜಿಯ ಹಿಂದಿನ ದಿನ ಬಳೆಗಾರರನ್ನು ಕರೆಸುವ ಪದ್ದತಿ ನಮ್ಮಲ್ಲಿತ್ತು. ಕೆಲವೊಮ್ಮೆ ಮನೆಯೊಡೆಯನಿಗೇ ಕರೆಸಲಾಗದಿದ್ದರೂ, ಬಳೆಗಾರರೇ ಸೀಮೆಯಲ್ಲಿ ಕಾರ್ಯಕ್ರಮವಿದೆ ಎಂದು ತಿಳಿದಾಗ ಬರುತ್ತಿದ್ದರು. ಅದೊಂದು ನಮ್ಮ ಹೆಮ್ಮೆಯ ಸಂಸ್ಕೃತಿ. ಸಾಮಾನ್ಯವಾಗಿ ಕಾರ್ಯಕ್ರಮಗಳಿಗೆ ತವರಿಗೆ ಬರುತ್ತಿದ್ದ ಹೆಣ್ಣು ಮಕ್ಕಳಿಗೆ ಕೈ ತುಂಬಾ ಬಳೆ ಇಡಿಸುವುದು ಕ್ರಮ. ಆ ಹಬ್ಬದ ವಾತಾವರಣದಲ್ಲಿ ಬಳೆಗಾರನ ಸುತ್ತ ಕುಳಿತ ಹೆಣ್ಣು ಮಕ್ಕಳನ್ನು ನೋಡುವುದೇ ಒಂದು ರೀತಿಯ ಸಂಭ್ರಮ. ಇನ್ನು ಬಳೆಗಾರರಿಗಂತೂ ಭರ್ಜರಿ ವ್ಯಾಪಾರದ ಜೊತೆ, ಹೊಟ್ಟೆ ತುಂಬಾ ವಿಶೇಷದೂಟ. 

ಆಧುನಿಕತೆಗೆ ತಕ್ಕಂತೆ ನಾವು-ನೀವೆಲ್ಲರೂ ನಮ್ಮ ವಂಶಪಾರಂಪರ್ಯವಾಗಿ ಬಂದಂತಹ ಉದ್ಯೋಗಗಳನ್ನು ಬಿಟ್ಟು, ಪಟ್ಟಣಕ್ಕೆ ವಲಸೆ ಬಂದಿದ್ದೇವೆ.  ಮಾನವೀಯತೆ, ಸೌಹಾರ್ದತೆಗಳು ಸಮಾಜದಲ್ಲಿ ಮರೆಯಾಗುತ್ತಿವೆ. ಹಾಗೆಯೇ ಬಳೆಗಾರರು ಕೂಡ ಮರೆಯಾಗಿದ್ದಾರೆ. ನಮ್ಮ ತಲೆಮಾರಿನವರು ಅವರ ಬಗ್ಗೆ ಕಂಡಿದ್ದೇವೆ, ಕೇಳಿದ್ದೇವೆ. ನಮ್ಮ ಮಕ್ಕಳಿಗೆ ಖಂಡಿತಾ ಇದರ ಬಗ್ಗೆ ಗೊತ್ತಿರಲೂ ಸಾಧ್ಯವಿಲ್ಲ. ನಮ್ಮ ಹಲವಾರು ಜಾನಪದ ಗೀತೆಗಳಲ್ಲಿ ಬಳೆಗಾರರ ಬಗ್ಗೆ ಉಲ್ಲೇಖವಿದೆ. ಹಲವಾರು ಜಾನಪದ ಕಥೆಗಳಲ್ಲಿ ಬಳೆಗಾರ ಕಥಾ ನಾಯಕನಾಗಿದ್ದಾನೆ. ಮುಂದಿನ ಪೀಳಿಗೆಗೆ ನಾವು ಇಂತಹ ಸಂಸ್ಕೃತಿಯ ಬಗ್ಗೆ ಹಾಡು, ಕಥೆಗಳಲ್ಲಷ್ಟೇ ತಿಳಿಸಲು ಸಾಧ್ಯ. ಇಂತಹ ಹಲವಾರು ನಮ್ಮ ಹೆಮ್ಮೆಯ ಸಂಸ್ಕೃತಿಗಳನ್ನು ನಾವು ಕಳೆದುಕೊಳ್ಳುತ್ತಿರುವುದು ನಮ್ಮೆಲ್ಲರ ವಿಪರ್ಯಾಸ.  

This article was published in TimesKannada news paper http://timeskannada.com/?p=6061


This Article was also published in Malenadu Mitra news paper 







Friday, September 9, 2016

ನೀ ಕನಸಿನೊಳಗೋ?.. ಕನಸು ನಿನ್ನೊಳಗೋ?..




"ಕನಸ್ಸು ಕಂಡೇನೇ.. ಮನದಲಿ ಕಳವಳ ಗೊಂಡೇನೇ.." ಎಂಬುದು ದಾಸವಾಣಿ. ರಾತ್ರಿ ಕಂಡ ಕನಸನ್ನು ಬೆಳಿಗ್ಗೆ ಮನೆಯವರೊಂದಿಗೆ ಮಾತನಾಡುವುದು ಸರ್ವೇ ಸಾಮಾನ್ಯ. ಕನಸುಗಳೇ ಹಾಗೆ. ಕೆಲವೊಮ್ಮೆ ಮನೋರಂಜಿಸುತ್ತವೆ, ಕೆಲವೊಮ್ಮೆ ಗೊಂದಲಿಸುತ್ತವೆ, ಇನ್ನೂ ಕೆಲವೊಮ್ಮೆ ವಿಲಕ್ಷಣವಾಗಿ ತೋರಲ್ಪಡುತ್ತವೆ. ಮಾರನೇ ದಿನ ನಮಗೆ ರಾತ್ರಿ ಬಿದ್ದ ಕನಸುಗಳು ನೆನಪಾದರೂ, ನೆನಪಾಗದೆ ಇದ್ದರೂ, ಕನಸುಗಳೇಕೆ ಬೀಳುತ್ತವೆ ? ಮೂಲತಃ ಕನಸುಗಳೆಂದರೇನು?

ಕನಸುಗಳೆಂದರೆ ಏನು?
ನಾವು ನಿದ್ರಿಸುವಾಗ ನಮ್ಮ ಮನಸ್ಸು ಸೃಷ್ಟಿಸುವ ಕಥೆ ಹಾಗು ಚಿತ್ರಣಗಳನ್ನು ಕನಸುಗಳೆನ್ನುತ್ತಾರೆ. ಕನಸುಗಳ ಬಗ್ಗೆ ಹಲವಾರು ಸಿದ್ದಾಂತಗಳಿದ್ದಾವೆ, ಆದರೆ ನೈಜವಾದ ಸಿದ್ದಾಂತದ ಬಗ್ಗೆ ಗೊಂದಲಗಳಿವೆ. ಕೆಲವು ಸಂಶೋಧಕರು ಕನಸುಗಳಿಗೆ ಸ್ಪಷ್ಟವಾದ ಅರ್ಥ ಅಥವಾ ಕಾರಣಗಳು ಇರುವುದಿಲ್ಲ, ಇವು ನಿದ್ರಾ ಮೆದುಳಿನ ಅಸಂಭದ್ದ ಕ್ರಿಯೆಗಳು ಎನ್ನುತ್ತಾರೆ. ಅಧ್ಯಯನಗಳ ಪ್ರಕಾರ ನಮ್ಮ ಆರೋಗ್ಯ ಮತ್ತು ಯೋಗಕ್ಷೇಮಗಳ ಮುಖ್ಯ ರೂವಾರಿ ಸುಖ ನಿದ್ರೆ ಮತ್ತು ಕನಸು. ಒಂದು ಅಧ್ಯಯನದ ಪ್ರಕಾರ ಕನಸುಕಾಣುತ್ತಿದ್ದ ವ್ಯಕ್ತಿಯನ್ನು ಸತತವಾಗಿಸಂಶೋಧಕರು ಎಚ್ಚರಗೊಳಿಸತೊಡಗಿದರು. ಕೆಲ ಸಮಯದ ನಂತರ ವ್ಯಕ್ತಿಯಲ್ಲಿ ಗಮನಿಸಿದ ಅಂಶಗಳು ಕೆಳಗಂಡಂತಿವೆ:
೧. ಒತ್ತಡ ಹೆಚ್ಚುವಿಕೆ. 
೨. ಆತಂಕ. 
೩. ಖಿನ್ನತೆ.  
೪. ಏಕಾಗ್ರತೆ ಕಮ್ಮಿಯಾಗುವಿಕೆ. 
೫. ಸಮನ್ವಯತೆ ಕಮ್ಮಿಯಾಗುವುದು. 
೬. ತೂಕ ಹೆಚ್ಚಾಗುವುದು. 
೭. ಭ್ರಮೆ ಜಾಸ್ತಿಯಾಗುವುದು. 

ತಜ್ಞರ ಪ್ರಕಾರ ಕನಸುಗಳಿಂದ ವ್ಯಕ್ತಿ ಮತ್ತು ವ್ಯಕ್ತಿತ್ವಕ್ಕೆ ಹಲವಾರು ಉಪಯೋಗಗಳಿವೆ:
೧. ಜೀವನದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. 
೨. ನೆನಪಿನಶಕ್ತಿ ಹೆಚ್ಚಿಸಲು. 
೩. ಭಾವನೆಗಳನ್ನು ಪ್ರಕ್ರಿಯಿಸಲು. 
ನೀವು ಮಲಗುವಾಗ ಸಮಸ್ಯೆಯಿಂದ ಕೂಡಿದ ಯೋಚನೆಗಳನ್ನಿಟ್ಟುಕೊಂಡಿದ್ದರೆ, ಏಳುವಾಗ ಪರಿಹಾರದೊಂದಿಗೆ ಏಳಲು ಸಹಾಯವಾಗುತ್ತದೆ ಅಥವಾ ಕೊನೆ ಪಕ್ಷ ಸಮಸ್ಯೆಯ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿರುತ್ತೀರಿ. 

ಸೈಮೌಂಡ್ ಫ್ರಾಯ್ಡ್ ರವರ ಪ್ರಕಾರ ಅಜಾಗೃತ ಮನಸ್ಸಿನ ಕಿಟಕಿ "ಕನಸುಗಳು". ಅವರ ಪ್ರಕಾರ ಕನಸುಗಳು ಒಬ್ಬ ಮನುಷ್ಯನ ಸುಪ್ತ ಮನಸ್ಸಿನ ಬೇಕು-ಬೇಡಗಳನ್ನು, ಯೋಚನೆಗಳನ್ನು ಮತ್ತು ಪ್ರೇರಣಾಗಳನ್ನು ಹೊರ ಹಾಕುತ್ತವೆ. ಆದರೆ ಈ ಎಲ್ಲ ಅಧ್ಯಯನಗಳ ಸಾರಾಂಶವಿಷ್ಟೆ. ಕೆಲವು ಕನಸುಗಳು ನಿಮ್ಮ ದಿನನಿತ್ಯದ ಯೋಚನೆಗಳನ್ನು ಮೆದುಳಿನೊಳಗೆ ಪ್ರಕ್ರಿಯಿಸುತ್ತವೆ. ಇನ್ನೂ ಕೆಲವು ನಮ್ಮ ದೈನಂದಿನ ಕ್ರಿಯೆಗೆ ತಕ್ಕಂತೆ ಅಂತೆಯೇ ಬೀಳುತ್ತವೆ. ಇನ್ನೂ ಸರಿಯಾದ ಉತ್ತರಕ್ಕಾಗಿ ಸಂಶೋಧಕರು ಇದರ ಬಗ್ಗೆ ಅಧ್ಯಯನ ನೆಡಸುತ್ತಿದ್ದಾರೆ. 


ಭಯಾನಕ ಕನಸು(Nightmares)ಗಳೇಕೆ ಬೀಳುತ್ತವೆ?
ಕೆಟ್ಟ ಕನಸುಗಳು ಮಕ್ಕಳು ಮತ್ತು ದೊಡ್ಡವರಲ್ಲಿ ತುಂಬಾ ಸಹಜ. ಕೆಟ್ಟ ಕನಸು ಬೀಳುವುದಕ್ಕೆ ಕೆಲವು ಕಾರಣಗಳೆಂದರೆ :
೧. ಒತ್ತಡ, ಭಯ ಮತ್ತು ಮನಸ್ತಾಪ. 
೨. ಭಾವನಾತ್ಮಕ ಸಮಸ್ಯೆಗಳು. 
೩. ಅತಿಯಾದ ಔಷಧಿಗಳ ಬಳಕೆ. 
೪. ಅನಾರೋಗ್ಯ ಸಮಸ್ಯೆ. 

ನಿಮಗೆ ಪದೇ-ಪದೇ ಭಯಾನಕ ಕನಸುಗಳು ಬೀಳುತ್ತಿದ್ದರೆ, ನಿಮ್ಮ ಸುಪ್ತ ಮನಸ್ಸು ನಿಮಗೆನನ್ನೋ ಹೇಳಲು ಪ್ರಯತ್ನಿಸುತ್ತಿರಬಹುದು. ಸುಪ್ತ ಮನಸ್ಸಿನ ಕಡೆ ಗಮನ ಕೊಡಿ. ನೀವು ಅದನ್ನು ಕಂಡು ಹಿಡಿಯುವಲ್ಲಿ ವಿಫಲರಾಗಿದ್ದರೆ, ಮಾನಸಿಕ ತಜ್ಞರನ್ನು ಭೇಟಿ ಮಾಡಿ. ನೆನಪಿನಲ್ಲಿಡಿ, ಕನಸು ಎಷ್ಟೇ ಭಯಾನಕವಾಗಿದ್ದರೂ ಕೂಡ ಅದು ಕನಸಷ್ಟೇ. ನಿಜ ಜೀವನದಲ್ಲಿ ಅದರಿಂದ ಏನೂ ಬದಲಾಗುವುದಿಲ್ಲ. 

ಸ್ಪಷ್ಟ ಕನಸು (Lucid Dreams)ಗಳೇಕೆ ಬೀಳುತ್ತವೆ?
ನಿಮಗೆ ಎಂದಾದರೂ ಕನಸು ಬೀಳುವಾಗ, ಕನಸಿನ ಅರಿವಾಗಿದ್ದುಂಟೇ? ಇದನ್ನೇ ಲ್ಯೂಸಿಡ್ ಡ್ರೀಮ್ಸ್ ಎನ್ನುತ್ತಾರೆ. ಅಧ್ಯಯನದ ಪ್ರಕಾರ ನಿದ್ರಾ ಸಮಯದಲ್ಲಿ ಪ್ರಕ್ಷುಬ್ಧವಾಗಿರಬೇಕಾದ ಮೆದುಳಿನ ಭಾಗಗಳು ಕ್ರಿಯಾಶೀಲವಾದಾಗ ಈ ತರಹದ ಕನಸುಗಳು ಬೀಳುತ್ತವೆ. ಮನುಷ್ಯ 'ಕಣ್ಣಿನ ತೀವ್ರಗತಿಯ ಚಲನೆ' ನಿದ್ರೆ (REM sleep) ಮತ್ತು ಎಚ್ಚರವಿರುವ ಹಂತಗಳ ಮಧ್ಯೆಯಿದ್ದಾಗ ಇಂಥಾ ಕನಸುಗಳು ಬೀಳುತ್ತವೆ. ಲ್ಯೂಸಿಡ್ ಕನಸುಗಳನ್ನು ಕಾಣುವ ವ್ಯಕ್ತಿಗಳು ತಮ್ಮ ಕನಸಿನ ಧಿಕ್ಕನ್ನು ಬದಲಿಸಬಲ್ಲರು.

ಕನಸುಗಳು ಭವಿಷ್ಯವನ್ನು ಹೇಳುತ್ತವೆಯೇ?
ಹಲವಾರು ಉದಾಹರಣೆಗಳಲ್ಲಿ ಬಿದ್ದ ಕನಸುಗಳು ನಿಜ ಜೀವನದಲ್ಲೂ ಕೂಡ ನೆಡೆದಿವೆ. ಸಂಶೋಧಕರ ಪ್ರಕಾರ ಕನಸುಗಳು ನಿಜವಾದಲ್ಲಿ ಅದಕ್ಕೆ ಕಾರಣಗಳಿವಿರಬಹುದು:
೧. ಕಾಕತಾಳೀಯ. 
೨. ದೋಷಯುಕ್ತ ನೆನಪು. 
೩. ಸುಪ್ತ ಮನಸ್ಸಿನ ಮತ್ತು ಗೊತ್ತಿರುವ ಆಲೋಚನೆಗಳನ್ನು link ಮಾಡಿರುವುದಾಗಿರಬಹುದು. 
ಕೆಲವೊಮ್ಮೆ ಕನಸುಗಳು ನಮ್ಮ ಜೀವನದ ದಿಕ್ಕನ್ನು ಬದಲಿಸುವಲ್ಲಿಗೆ ಪ್ರೇರೇಪಿಸಬಲ್ಲವು. ದಿಕ್ಕನ್ನು ಬದಲಿಸಬಲ್ಲ ಕನಸುಗಳು ಒಂದು ರೀತಿಯಲ್ಲಿ ಭವಿಷ್ಯ ನುಡಿದಂತಲ್ಲವೇ?

ಕನಸುಗಳು ಹೇಗೇ ಇದ್ದರೂ, ಭವಿಷ್ಯವನ್ನು ಹೇಳದೇ ಇದ್ದರೂ ಅವು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಕೊನೆ ಪಕ್ಷ ಒಂದಾದರೂ ಕನಸು ಮರೆಯಲಾಗದ್ದಿರುತ್ತದೆ. ಹಾಸ್ಯ ಭರಿತವಾದ ಅದೆಷ್ಟೋ ಕನಸುಗಳು ನಮ್ಮನ್ನು ರಂಜಿಸಿರುತ್ತವೆ. ಗೊತ್ತಿಲ್ಲದ ಅದೆಷ್ಟೋ ವ್ಯಕ್ತಿಗಳನ್ನು ಕನಸಿನಲ್ಲಿ ಭೇಟಿ ಮಾಡಿರುತ್ತೇವೆ. ಯಾವುದಕ್ಕೂ ಹೆದರದ ವ್ಯಕ್ತಿಯನ್ನ ಕನಸು ಬೆಚ್ಚಿ ಬೀಳಿಸಿರುತ್ತದೆ. ಅಂತಹ ಭಿನ್ನ-ವಿಭಿನ್ನ ಕನಸುಗಳ ವಿಸ್ಮಯವನ್ನು ಸೃಷ್ಟಿಸಿದ ನಿಸರ್ಗೆಗೊಂದು ಸಲಾಮು.

This Article was published on Timeskannada e-newspaper  http://timeskannada.com/?p=5304


Also,  this artcle was published in news paper called "malenaadu mitra"


Tuesday, September 6, 2016

ನಮ್ಮ ಮಕ್ಕಳಿಗೆ ಮಾತೃ ಭಾಷೆ ಕಲಿಸುವುದು ಎಷ್ಟು ಮುಖ್ಯ?




ಕನ್ನಡ ಎನೆ ಕುಣಿದಾಡುವುದೆನ್ನೆದೆ .. 
ಕನ್ನಡ ಎನೆ ಕಿವಿ ನಿಮಿರುವುದು ... 

ಶಾಲಾ ದಿನಗಳಲ್ಲಿ ಕೇಳಿದ ರಾಷ್ಟ್ರಕವಿ ಕುವೆಂಪೂರವರ ಕವನದ ಸಾಲುಗಳಿವು. ಮೇಲಿನಸಾಲುಗಳು ಅಕ್ಷರಶಃ ಸತ್ಯ. ಕನ್ನಡ ಎಂದಾಕ್ಷಣ ನಮ್ಮ ಮನಸ್ಸು ಕುಣಿದಾಡುವುದೆಂದರೆ, ಅದಕ್ಕೊಂದು ಕಾರಣವಿದೆ. ಅದು ನಮ್ಮೆಲ್ಲರ ಪ್ರೀತಿಯ ಮಾತೃ ಭಾಷೆ. ಮಾತೆ ಹಾಗೂ ಮಾತೃ ಭಾಷೆಯೇ ಹಾಗೆ. ಸಾವಿರಾರು ಜನರ ಮಧ್ಯೆ ನಮ್ಮ ತಾಯಿ ಯಾರೆಂದು ನಾವು ಗುರುತಿಸಬಲ್ಲೆವು. ಹಾಗೆಯೇ, ನೂರಾರು ಭಾಷೆಗಳ ನಡುವೆ ಕನ್ನಡವನ್ನು ಕೇಳಿದರೆ ಖಂಡಿತಾ ಕಿವಿ ನಿಮಿರುತ್ತದೆ. ಹಾಗಾದರೆ ಮಾತೃ ಭಾಷೆ ಯಾವುದೇ ಇರಲಿ ಅದಕ್ಕೇಕೆ ಅಷ್ಟೊಂದು ಮಹತ್ವ? ಹೆಸರೇ ಹೇಳುವಂತೆ,  ತಾಯಿ ತನ್ನ ಮಗುವನ್ನು ಗರ್ಭದಲ್ಲಿ ಹೊರುವಾಗ ಮಾತನಾಡಿದ ಭಾಷೆಯದು. ನಾವು ನಮ್ಮ ಕಿವಿಯಲ್ಲಿ ಕೇಳಿದ ಮೊದಲ ಭಾಷೆ. ತಾಯಿ-ಮಗುವಿನ ಭಾವನೆಗಳನ್ನು ಸಂಪರ್ಕಿಸಲು ಸಹಾಯ ಮಾಡಿದ ಭಾಷೆ. ಹಾಗಾದರೆ ನಮ್ಮ ಮಾತೃ ಭಾಷೆ ಕನ್ನಡವನ್ನು ನಾವು ಎಷ್ಟು ಪೋಷಿಸಿ ಬೆಳೆಸುತ್ತಿದ್ದೇವೆ?

ಕಾಲಾನುಸಾರವಾಗಿ, ಸಂದರ್ಭಾನುಸಾರವಾಗಿ ನಾವು ಕರ್ನಾಟಕವನ್ನು ಬಿಟ್ಟು ಬಹುದೂರ ಬಂದಿದ್ದೇವೆ. ಅಷ್ಟೇ ಏಕೆ ಅನಿವಾಸಿ ಭಾರತೀಯರೆಂಬ ಹಣೆಪಟ್ಟಿಯನ್ನು ಕೂಡ ಪಡೆದಿದ್ದೇವೆ. ತಾಯಿಯಿಂದ ದೂರಾದಾಕ್ಷಣ ಆಕೆಯನ್ನು ಮರೆಯಲು ಸಾಧ್ಯವೇ? ಕರ್ನಾಟಕದಿಂದ ದೂರಾದಾಕ್ಷಣ ಕನ್ನಡವನ್ನು ಮರೆಯಬೇಕೆಂದೇ? ಅನಿವಾಸಿ ಕನ್ನಡಿಗಳಾದ ನಾನು ಅನೇಕ ಜನ ಕನ್ನಡಿಗರನ್ನು ನೋಡಿದ್ದೇನೆ. ಕನ್ನಡ ಕೂಟಗಳಿಗೆ, ಕನ್ನಡ ಸಿನೆಮಾಗಳಿಗೆ ಹೋಗುವುದೆಂದರೆ ತುಂಬಾ ಆಸಕ್ತಿ ತೋರಿಸುತ್ತಾರೆ. ಅಲ್ಲಿ ಬಂದಾಕ್ಷಣ ಸ್ನೇಹಿತರೊಂದಿಗೆ, ಮಕ್ಕಳೊಂದಿಗೆ, ಕಾರ್ಯಕರ್ತರೊಂದಿಗೆ Englishನಲ್ಲಿ ಮಾತನಾಡುವುದು. ಕನ್ನಡ ಮಾತನಾಡಿದರೆ ಎಲ್ಲಿ ತಮ್ಮ ಗೌರವಕ್ಕೆ ಧಕ್ಕೆಯಾಗಿ ಬಿಡುವುದೆಂಬ ಭಯ. ಸ್ನೇಹಿತರೆ, ಕನ್ನಡ ನಮ್ಮನ್ನು ಅವಮಾನಿಸಿದೆಯೇ? ಅಥವಾ ನಮ್ಮನ್ನು ಪೋಷಿಸಿ, ಬೆಳೆಸಿ ಈ ಮಟ್ಟಕ್ಕೆ ಬೆಳೆಯಲು ಸಹಾಯ ಮಾಡಿದೆಯೇ? ನೀವೇ ಯೋಚಿಸಿ. ನಾವು ಮೊದ ಮೊದಲು ಭಾವನೆಗಳನ್ನು ತೋರಿಸಿದ್ದು ಕನ್ನಡದಲ್ಲಿ, english, hindi ಅಷ್ಟೇ ಏಕೆ ಕಲಿತ ನೂರಾರು ಭಾಷೆಗಳನ್ನು  ಮನದಾಳದಲ್ಲಿ ಅರ್ಥೈಸಿಕೊಂಡಿದ್ದು ಕನ್ನಡದಲ್ಲಿ. ಹೀಗಿರುವಾಗ ಮಾತನಾಡಲು ಹಿಂದು-ಮುಂದು ನೋಡುವುದೇಕೆ? ಕನ್ನಡ ನಿಮ್ಮನ್ನು ಬೆಳೆಸಿರುವಾಗ, ಕನ್ನಡವನ್ನು ಬೆಳೆಸಲು ನೀವೇಕೆ ಹಿಂಜರಿಯುತ್ತೀರಿ?

ಕನ್ನಡವನ್ನು ಬೆಳೆಸಬೇಕೆಂದರೆ ನೀವು ಸಂಸ್ಥೆ ಕಟ್ಟಿ ಪ್ರಚಾರ ಕೊಡಬೇಕೆಂದಲ್ಲ. ನಿಮಗೆ ಗೊತ್ತಿರುವ ಕನ್ನಡವನ್ನು, ಕನ್ನಡಿಗರೊಂದಿಗೆ ಮತ್ತು ಕನ್ನಡ ಕಲಿಯಲು ಆಸಕ್ತಿ ಇರುವವರೊಂದಿಗೆ ಮಾತನಾಡಿ. ಮುಖ್ಯವಾಗಿ, ನೀವು ತಂದೆ-ತಾಯಿಗಳಾಗಿದ್ದಲ್ಲಿ ಮನೆಯಲ್ಲಿ ಕನ್ನಡ ಮಾತಾಡಿ.  ನಾವು ಕನ್ನಡ ಪೋಷಿಸುವುದೆಷ್ಟು ಮುಖ್ಯವೋ, ಅಷ್ಟೇ ಜವಾಬ್ದಾರಿಯುತವಾದ ಕೆಲಸ ನಮ್ಮ ಮಕ್ಕಳಿಗೆ ಕನ್ನಡ ಕಲಿಸುವುದು. ಇತ್ತೀಚಿನ ಒಂದು ಅಧ್ಯನದ ಪ್ರಕಾರ, ಮಾತೃಭಾಷೆ ಚೆನ್ನಾಗಿ ಗೊತ್ತಿರುವ ಮಕ್ಕಳ ಗ್ರಹಣ ಶಕ್ತಿ ಹೆಚ್ಚಾಗಿರುತ್ತದೆ ಎಂದು ಸಾಬೀತಾಗಿದೆ. ಏಕೆಂದರೆ ಅಂತಹ ಮಕ್ಕಳು ಯಾವುದೇ ಭಾಷೆಯನ್ನು, ವಿಷಯವನ್ನು ತಮ್ಮ ಅನುಕೂಲಕ್ಕೆ ತಕ್ಕಹಾಗೆ ಮಾತೃ ಭಾಷೆಯಲ್ಲಿ ಅರ್ಥೈಸಿಕೊಳ್ಳುತ್ತಾರೆ.  ಇದನ್ನು ಅಮೆರಿಕನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ಸ್ ಕೂಡ ಒಪ್ಪಿಕೊಂಡಿದೆ. ಅಂತಹ ಮಕ್ಕಳು ಮಾತೃಭಾಷೆಯೊಂದೇ ಅಲ್ಲದೆ ಭಾಷಾ ಕಲಿಕೆಯಲ್ಲಿ ಕೂಡ ಮುಂದಿರುತ್ತಾರೆ. 
ನಾವು ನಮ್ಮ ಮಕ್ಕಳಿಗೆ ಮಾತೃಭಾಷೆ ಕಳಿಸುವದರಿಂದಾಗುವ ಉಪಯೋಗಗಳು:
೧. ಗ್ರಹಣ ಶಕ್ತಿ ಹೆಚ್ಚಾಗುತ್ತದೆ. 
೨. ಭಾಷೆ ಕಲಿಸುವದರಿಂದ ನಮ್ಮ ಸಂಸ್ಕೃತಿಯ ಪರಿಚಯವಾಗುತ್ತದೆ. 
೩. ಭಾವನಾತ್ಮಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯವಾಗುತ್ತದೆ. 
೪. ಮಾತೃಭಾಷೆ ಕಲೆ-ಸಂಸ್ಕೃತಿಯ ಪ್ರತೀಕ. ಕಲೆ-ಸಾಹಿತ್ಯದ ಆಸಕ್ತಿಯಿರುವ ಮಕ್ಕಳಿಗೆ, ಕಲಿಕೆಗೆ ಭಾಷೆಯ ಸಹಾಯ ಸಿಗುತ್ತದೆ.
೫. ಮುಂದೊಂದು ದಿನ ನಿಮ್ಮ ಮಗು ತನ್ನ ಬೇರನ್ನು ಅರಸಿ ತಾಯ್ನಾಡಿಗೆ ಮರಳಿದಾಗ, ನಿಮ್ಮ ಸಹಾಯದ ಅವಶ್ಯಕತೆ ಇರುವುದಿಲ್ಲ. 

ಪೋಷಕರೇ, ಹೊರಗಿನ ಸಮಾಜ ಮತ್ತು ಸ್ಥಳೀಯ ಭಾಷೆಯ (native language) ಬಗ್ಗೆ ಭಯ ಪಡಬೇಡಿ. ಕೆಲವೊಂದು ವಿಷಯಗಳು ನಮ್ಮ ಸಮಾಜದಿಂದ ಉಚಿತ ಕೊಡುಗೆಯಾಗಿ ಸಿಗುತ್ತವೆ. ಅದರಲ್ಲಿ ಭಾಷೆ ಕೂಡ ಒಂದು. ನೀವು ಕಲಿಸದೇ ಇದ್ದರೂ ಕೂಡ, ನಿಮ್ಮ ಮಗು Englishaನ್ನು ಚೆನ್ನಾಗಿ ಮಾತನಾಡುತ್ತದೆ. ಏಕೆಂದರೆ ಅದು ವ್ಯಾವಹಾರಿಕ ಭಾಷೆಯಾಗಿರುವದರಿಂದ, ಮಗು ಬಹು ಬೇಗ ಕಲಿಯಬಲ್ಲದು. ಉಚಿತವಾಗಿ ಬರುವಾಗ, ಅದನ್ನು ಉಪಯೋಗಿಸಿಕೊಳ್ಳಿ ಮತ್ತು ನಿಮ್ಮ ಮಕ್ಕಳಿಗೆ ಮಾತೃ ಭಾಷೆ ಕಲಿಸಿ. ಕನ್ನಡ ಉಳಿಸಿ, ಬೆಳೆಸಿ. 
ಹಾಗಾದರೆ ಪೋಷಕರಾದ ನೀವು ಮಾಡಬೇಕಾಗಿರುವುದಾದರೂ ಏನು ?
೧. ನಿಮ್ಮ ಮಕ್ಕಳು, ನಿಮ್ಮ ಮಾತೃ ಭಾಷೆಯನ್ನು ಪ್ರೀತಿಸಲು ಅನುವು ಮಾಡಿ ಕೊಡಿ. 
೨. ವ್ಯಾವಹಾರಿಕ ಭಾಷೆಯನ್ನು ಹೊರಗಿನ ಪ್ರಪಂಚಕ್ಕೆ ಕಲಿಸಲು ಬಿಡಿ. 
೩. ಮನೆಯಲ್ಲಿ ಕನ್ನಡ ಮಾತಾಡಿ. ಕಥೆ ಹೇಳುವಾಗ ಆದಷ್ಟು ಕನ್ನಡ ಬಳಸಿ. 
೪. ಕನ್ನಡ ಹಾಡುಗಳನ್ನು ಕೇಳಲು ಅನುವು ಮಾಡಿಕೊಡಿ. 
೫. Internetಲ್ಲಿ ಸಿಗುವ ಕನ್ನಡ ಪುಸ್ತಕ, ಕನ್ನಡ ಪದ್ಯಗಳ ಪರಿಚಯ ಮಾಡಿಸಿ.
 ೬. ಹತ್ತಿರವಿರುವ ಕನ್ನಡ ಕಲಿಕಾ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಿ. 
೭. ರಜಾ ದಿನಗಳಲ್ಲಿ ನಿಮ್ಮವರನ್ನು ಭೇಟಿಯಾಗಲು ಅವಕಾಶ ಮಾಡಿ ಕೊಡಿ. 
೮. ನಮ್ಮ ಕಲೆ-ಸಂಸ್ಕೃತಿಯ ಪರಿಚಯ ಮಾಡಿಸಿ. 

ನಮ್ಮ ಭಾಷೆಯನ್ನು ನಾವು ಪ್ರೀತಿಸಿದರೆ, ಉಳಿದವರೂ ಪ್ರೀತಿಸುತ್ತಾರೆ. ಕನ್ನಡಿಗರಾದ ನಮಗೆ, ನಮ್ಮ ಕಲೆ-ಸಂಸ್ಕೃತಿಯನ್ನು ಉಳಿದ ಪ್ರಪಂಚಕ್ಕೆ ಪರಿಚಯಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಕಲೆ-ಸಂಸ್ಕೃತಿಯ ಪರಿಚಯಕ್ಕೊಂದು ಒಳ್ಳೆಯ ವೇದಿಕೆ AKKA. ಬಿಡುವಿದ್ದರೆ, ನೀವು ನಿಮ್ಮವರೊಂದಿಗೆ ಭೇಟಿ ಕೊಡಿ. ನಮ್ಮ ಭಾಷೆ, ಸಂಸ್ಕೃತಿ, ಕಲೆ, ಆಹಾರ ಪದ್ದತಿಯ ಬಗ್ಗೆ ಪರಿಚಯ ಮಾಡಿ ಕೊಡಿ. 

This article is one of the only 16 articles published in AKKA 2016 in the book called "anivaasigaLalli kannada prajne"








Thursday, August 25, 2016

ಮನಸ್ಸಿಗೆ ಮುದ ನೀಡುವ ಮನೋಲ್ಲಾಸಿನಿ, "ಹಿಂದೋಳ"..




ಕೆಲವೊಂದು ರಾಗಗಳೇ ಹಾಗೆ. ಒಮ್ಮೆ ಕೇಳಿದರೆ, ಕಿವಿಯೊಳಗೆ ದಿನವೆಲ್ಲ ಗುಯ್ ಗುಡುತ್ತಿರುತ್ತವೆ. ಬೇರೆ ಹಾಡುಗಳನ್ನರಸಿ ಬಾಯಿ ಹೊರಟರೂ, ಮನಸ್ಸು ಅಲ್ಲೇ ಸ್ಥಬ್ಧವಾಗುವಂತೆ ಮಾಡಿರುತ್ತವೆ. ಹೀಗೊಂದು ಹಾಡು ಮೊನ್ನೆ ನನ್ನೊಳಗೆ ಹೊಕ್ಕು ಕಿವಿಯನ್ನು ಕೊರೆಯುತ್ತಿತ್ತು. ಹಾಡು ತಮಿಳು ಭಾಷೆಯದ್ದಾದರೂ ಮನಸಲ್ಲಿ ಬೇರೂರಿದ್ದು ಅದರ ರಾಗ. ಅದೇ.. ರಾಗ "ಹಿಂದೋಳ". 

ಹಿಂದೋಳ ಕರ್ನಾಟಕ ಶಾಸ್ತ್ರೀಯ ಪ್ರಕಾರದ ಒಂದು ರಾಗ.  ಇದಕ್ಕೆ ದಕ್ಷಿಣ ಭಾರತದಲ್ಲಿ ವಿಶೇಷ ಸ್ಥಾನವಿದೆ. ಇದು ಔಡವ ರಾಗ (ಪಂಚಸ್ವರ scale ಅಥವಾ pentatonic scale). ಇದೊಂದು ಜನ್ಯ ರಾಗವೂ ಹೌದು (ಇದರಲ್ಲಿ ಸಪ್ತ ಸ್ವರಗಳಿರುವುದಿಲ್ಲವಾದ್ದರಿಂದ). ಕರ್ನಾಟಕ ಶಾಸ್ತ್ರೀಯ ಪ್ರಕಾರದ "ಹಿಂದೋಳ" ಮತ್ತು ಹಿಂದುಸ್ಥಾನಿ ಶಾಸ್ತ್ರೀಯ ಪ್ರಕಾರದ "ಹಿಂದೋಳ್" ಬೇರೆ ಬೇರೆ ರಾಗಗಳು. ಕರ್ನಾಟಕ ಶಾಸ್ತ್ರೀಯಾದ ಹಿಂದೊಳಕ್ಕೆ ಪ್ರತಿರೂಪವಾದ ಹಿಂದುಸ್ಥಾನಿ ರಾಗ ಮಾಕೋಶ್. 

ಹಿಂದೋಳ ರಾಗದ ಪ್ರಸಿದ್ದಿ ಇರುವುದೇ ಮನೋಲ್ಲಾಸಕ್ಕಾಗಿ, ಮಾನಸ್ಸಿಗೆ ಮುದ ನೀಡುವುದಕ್ಕಾಗಿ. ದೊಡ್ಡ ದೊಡ್ಡ ಸಂಗೀತ ಕಚೇರಿಗಳಲ್ಲಿ ಸಾಮಾನ್ಯವಾಗಿ ವಿದ್ವಾಂಸರು ಈ ರಾಗವನ್ನು ಹಾಡುತ್ತಾರೆ. 

ರಚನೆ ಮತ್ತು ಲಕ್ಷಣ:

ಹಿಂದೋಳ "ಸಮ್ಮೀತೀಯ" ರಾಗವಾಗಿದ್ದು ರಿಷಭ ಮತ್ತು ಪಂಚಮಗಳಿರುವುದಿಲ್ಲ. ಇದು ಔಡವ ಔಡವ (ಔಡವ = ೫) ರಾಗವಾಗಿರುತ್ತದೆ. Pentatonic Scale ಭಾರತೀಯ ಸಂಗೀತ ಶಾಸ್ತ್ರವಲ್ಲದೆ, ಚೈನೀಸ್ ಮತ್ತು ಈಸ್ಟ್ ಏಶಿಯನ್ ಸಂಗೀತಗಳಲ್ಲೂ ಇರುವುದರಿಂದ, ನಾವು ಹಿಂದೋಳ ರಾಗದ ನೆರಳನ್ನು ಅಲ್ಲೂ ಕಾಣಬಹುದು. 

ಹಿಂದೋಳ ರಾಗದ ಆರೋಹಣ-ಅವರೋಹಣಗಳು ಈ ಕೆಳಗಂಡಂತಿದೆ: 
ಸ   ಗ2   ಮ1   ದ1    ನೀ2   ಸ 
ಸ   ನೀ2   ದ1   ಮ1   ಗ2    ಸ 
ಸಾಧಾರಣ ಗಾಂಧಾರ, ಶುದ್ಧ ಮಾಧ್ಯಮ, ಶುದ್ಧ ದೈವತ, ಕೈಶಿಕಿ ನಿಷಾದಗಳು ಈ ರಾಗದ ಸ್ವರಗಳು. ಸಂಗೀತ ಲೋಕದಲ್ಲಿ ಹಿಂದೋಳ ರಾಗದ ಉದ್ಭವಕ್ಕೆ ಕಾರಣವಾದ ರಾಗದ ಬಗ್ಗೆ ದ್ವಂದ್ವವಿದೆ. ಕೆಲ ವಿದ್ವಾಂಸರ ಪ್ರಕಾರ ಇದು "ನಟಭೈರವಿ" (೨೦ನೇ ಮೇಳಕರ್ತ) ರಾಗದಿಂದ ಉದ್ಭವವಾಗಿದ್ದರೆ, ಕೆಲವರ ಪ್ರಕಾರ "ಹನುಮತೋಡಿ" (೮ನೇ ಮೇಳಕರ್ತ) ರಾಗದಿಂದ ಉದ್ಭವಿಸಿದೆ ಎನ್ನುತ್ತಾರೆ. ಹಿಂದೋಳ ಈ ಎರಡೂ ರಾಗಗಳಿಂದ ಕೂಡ ಜನಿಸಿರಬಹುದು. ರಿಷಭ ಮತ್ತು ಪಂಚಮ ಬಿಟ್ಟರೆ ಎರಡೂ ರಾಗಗಳನ್ನು ಕಾರಣಿಸಬಹುದು. ಆದ್ದರಿಂದಲೇ ಹಿಂದೋಳ ಮೇಳಕರ್ತ ರಾಗವಲ್ಲ (ಸಪ್ತ ಸ್ವರಗಳನ್ನು ಹೊಂದಿಲ್ಲ). 

 ಪ್ರಸಿದ್ಧ ಸಂಯೋಜನೆಗಳು:
ಸಾಮಜವರ ಗಮನ (ತ್ಯಾಗರಾಜ)
ಮಾಮಾವತು ಶ್ರೀ (ಮೈಸೂರು ವಸುದೇವಾಚಾರ)
ಗೋವರ್ಧನ ಗಿರಿ ಸ್ಮರಾಮಿ (ಮುತ್ತುಸ್ವಾಮಿ ದೀಕ್ಷಿತರ)
ಸಾಮಗಾನ ಲೋಲೆ (ಪಾಪನಾಶಂ ಶಿವನ್)
ನಂಬಿ ಕೆಟ್ಟವರ (ಪಾಪನಾಶಂ ಶಿವನ್)

ಇವಿಷ್ಟೇ ಅಲ್ಲದೆ ಇನ್ನು ಹಲವಾರು ಭಜನೆ, ಕೃತಿ, ಸ್ತೋತ್ರ ಮತ್ತು ಸಿನಿಮಾ ಸಂಗೀತಗಳಲ್ಲಿ "ಹಿಂದೋಳ" ರಾಗವನ್ನು ಬಳಸಿಕೊಳ್ಳಲಾಗಿದೆ. 

"ಹಿಂದೋಳ" ರಾಗದ ಗ್ರಹಭೇದ ಮಾಡಿದಾಗ ೪ ರಾಗಗಳು ಸಿಗುತ್ತವೆ.  ಅವೇ ಮೋಹನ, ಶುದ್ಧ ಸಾವೇರಿ, ಉದಯರವಿ ಚಂದ್ರಿಕಾ (ಶುದ್ಧಧನ್ಯಾಸಿ) ಮತ್ತು ಮಧ್ಯಮಾವತಿ. 

ಕೆಲ ಪ್ರಸಿದ್ದಿ ಪಡೆದ "ಹಿಂದೋಳ" ರಾಗದ ಸಿನಿಮಾ ಹಾಡುಗಳ link ಕೆಳಗಿವೆ:


This Article was published on Timeskannada e-newspaper http://timeskannada.com/?p=4300