Wednesday, March 15, 2017

ಸುಗ್ಗಿ ಸಂಭ್ರಮದ ಸುಂದರ ಹಬ್ಬ - ಸಂಕ್ರಾಂತಿ


ಸಂಕ್ರಾಂತಿ ಅಥವಾ ಸುಗ್ಗಿಯ ಹಬ್ಬ ಭಾರತದ ಬಹು ಭಾಗಗಳಲ್ಲಿ ಆಚರಿಸುವ ಹಬ್ಬ. ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸಲ್ಪಡುವ ಈ ಹಬ್ಬವನ್ನು, ಸಂಕ್ರಾಂತಿ ಎಂದು ಕರ್ನಾಟಕ, ಆಂಧ್ರ, ತೆಲಂಗಾಣ, ಬಿಹಾರ್, ಝಾರ್ಖಂಡ್ ಮುಂತಾದ ಹಲವಾರು ರಾಜ್ಯಗಳಲ್ಲಿ ಕರೆಯುತ್ತಾರೆ. ಸಂಕ್ರಾತಿ ಪದದ ನಿಜವಾದ ಅರ್ಥ "ಚಲನ". ಜೀವವಿರುವ ಪ್ರತಿಯೊಂದು ವಸ್ತುವೂ ಚಲಿಸಲೇಬೇಕು. ನಮ್ಮ ಹಿರಿಯರು ನಮಗಿಂತ ಮೊದಲು ಚಲಿಸಿದರೆ, ನಮಗಿಂತ ಕಿರಿಯರು ನಮ್ಮ ಚಲನಕ್ಕೆ ಕಾಯುತ್ತಾರೆ. ಭೂ ಮಂಡಲ ಚಲಿಸುವಾಗ ಅದಕ್ಕನುಸಾರವಾಗಿ ಜೀವಿಗಳನ್ನು ತರಬೇತಿ ನೀಡುತ್ತದೆ. ಚಲನೆ ಒಂದು ಹಂತದವರೆಗೆ ಸುಖಕರವಾಗಿರುತ್ತದೆ. ನಿಧಾನವಾಗಿ ಋತುಗಳನ್ನು ಬದಲಿಸುತ್ತಾ ಚಲಿಸುವ ಭೂಮಿ, ಒಂದೇ ಭಾರಿಗೆ ರಭಸವಾಗಿ ಚಲಿಸಲಾರಂಭಿಸಿದರೆ ನಮ್ಮ ಗತಿ ದೇವರೇ ಬಲ್ಲ. ಆದ್ದರಿಂದ ಯಾವುದೇ ಚಲನೆಗೆ ಪರಿಮಿತಿಯ ಅವಶ್ಯಕತೆ ತುಂಬಾ ಇದೆ.

ಮಕರ ಸಂಕ್ರಾತಿಯ ವೈಶಿಷ್ಟ್ಯ:
ರಾಶಿಚಕ್ರದ ಮಹತ್ತರ ಬದಲಾವಣೆಯೇ ಮಕರ ಸಂಕ್ರಾಂತಿಯ ಮಹತ್ವ. ಈ ರಾಶಿಚಕ್ರದಲ್ಲಾಗುವ ಮಹತ್ತರ ಬದಲಾವಣೆಯನ್ನು ಭೂ ಮಂಡಲದಲ್ಲಿರುವ ನಾವು ನೀವೆಲ್ಲರೂ ಖಂಡಿತ ಅನುಭವಿಸಿದ್ದೇವೆ. ಇಂತಹ ಹಲವಾರು ಸಂಕ್ರಾಂತಿಗಳು ವರ್ಷವಿಡೀ ಬಂದರೂ, ಮಕರ ಸಂಕ್ರಾಂತಿ ಮತ್ತು ಅದರ ವಿರುದ್ಧ ಏರ್ಪಡುವ ಕರ್ಕ ಸಂಕ್ರಾಂತಿಗಳಲ್ಲಿ ರಾಶಿ ಚಕ್ರದ ಬದಲಾವಣೆಗಳು ಮಹತ್ತರ. ಮಕರ ಸಂಕ್ರಾಂತಿಯಂದು ಸೂರ್ಯ ಭೂಮಿಯ ಉತ್ತರಭಾಗದೆಡೆ ಬರುವುದರಿಂದ ಇದನ್ನು ಉತ್ತರಾಯಣವೆನ್ನುತ್ತಾರೆ (ಉತ್ತರ + ಅಯನ ). ಕರ್ಕ ಸಂಕ್ರಾಂತಿಯ ನಂತರ ಸೂರ್ಯ ಭೂಮಿಯ ದಕ್ಷಿಣದೆಡೆ ಕಂಡು ಬರುವುದರಿಂದ ಇದನ್ನು ದಕ್ಷಿಣಾಯಣವೆಂದೂ ಕರೆಯುತ್ತಾರೆ. ಭಾರತೀಯರಿಗೆ ಮಕರ ಸಂಕ್ರಾಂತಿಯ ನಂತರ ಸೂರ್ಯ ಸನಿಹವಾಗುವುದರಿಂದ ಬೆಳಕಿನ ಪ್ರಭಾವಳಿ ಜಾಸ್ತಿ.

ರವೇಃ ಸಂಕ್ರಮಣಂ ರಾಶೌ  ಸಂಕ್ರಾಂತಿರಿತಿ ಕಥ್ಯತೇ।
ಸ್ನಾನದಾನತಪಃಶ್ರಾದ್ಧಹೋಮಾದಿಷು ಮಹಾಫಲಾ।।
ಮೇಷಾದಿಷು ದ್ವಾದಶರಾಶಿಷು ಕ್ರಮೇಣ ಸಂಸಾರತಃ ಸೂರ್ಯಸ್ಯ 
ಪೂರ್ವಸ್ಮಾದ್ರಾಶೇಃ ಉತ್ತರರಾಶೌ ಸಂಕ್ರಮಣಂ ಪ್ರವೇಶಃ ಸಂಕ್ರಾಂತಿಃ ।

ಒಂದು ರಾಶಿಯಿಂದ ಮುಂದಿನ ರಾಶಿಗೆ ರವಿಯ ಪ್ರವೇಶವನ್ನು ಸಂಕ್ರಮಣವೆಂದು ಕರೆಯಲಾಗುತ್ತದೆ. ಆ ಮುಹೂರ್ತದಲ್ಲಿ ಸ್ನಾನ, ದಾನ, ಜಪ, ಶ್ರಾದ್ಧ, ಹೋಮಾದಿ ಆಚರಣೆಗಳನ್ನು ಮಾಡಿದರೆ ಮಹಾಫಲ ಪ್ರಾಪ್ತವಾಗುತ್ತದೆ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯಲ್ಲಿ ಪ್ರವೇಶ ಮಾಡುವುದಲ್ಲದೇ ಗ್ರಹಗಳು, ನಕ್ಷತ್ರ ಮತ್ತು ರಾಶಿಗಳಲ್ಲಿ ಪ್ರವೇಶ ಮಾಡುವುದು ಕೂಡ ಸಂಕ್ರಾಂತಿ ಪುಣ್ಯಕಾಲದಲ್ಲಿಯೇ. ಆದರೂ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವುದನ್ನೇ ವಿಶೇಷವಾಗಿ ಸಂಕ್ರಾಂತಿಯೆಂದು ಕರೆಯುವುದು ರೂಢಿಯಾಗಿದೆ

ಕಾಲವೊಂದಿತ್ತು ಮಾನವ ಭೂಮಿಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳನ್ನು ಹಾಗೆ ತಿನ್ನಲಷ್ಟೆ ಕಲಿತಿದ್ದ. ಕಾಲ ಮುಂದುವರಿದಂತೆ ತನ್ನ ಆಹಾರವನ್ನು ತಾನೇ ತಯಾರಿಸಲು ಕಲಿತ. ತಯಾರಿಸುವ ಕಲಿಕಾ ವಿಧಾನದಲ್ಲಿ, ಕೃಷಿ ಮಾಡುವುದನ್ನೂ ಕಲಿತ. ಮಾನವನಿಗೆ ಹುಡುಕಿ ತಿನ್ನುವಾಗ ಇರುವುದಷ್ಟೇ ಉಪಯೋಗಿಸಲು ಗೊತ್ತಿತ್ತು. ಕೃಷಿಯೊಂದಿಗೆ ತನಗೆ ಬೇಕಾದ್ದನ್ನು ತಯಾರಿಸಿಕೊಳ್ಳುವ ವಿಧಾನವನ್ನು ಕಲಿತುಕೊಂಡ. ನಾವು ಮಗುವಾದಾಗ ತಾಯಿ ಕೊಟ್ಟಿದ್ದನ್ನಷ್ಟೇ ತಿನ್ನಲು ಗೊತ್ತಿರುತ್ತದೆ, ಬೆಳೆಯುತ್ತಾ ಹೋದಂತೆ ನಾವು ಸ್ವಾವಲಂಬಿಗಳಾಗುತ್ತೇವೆ - ಇದೊಂದು ಮಾನವ ಕುಲದ ಬದಲಾವಣೆಗೆ ಸಂಕ್ಷಿಪ್ತ ಪರ್ಯಾಯಾವಲೋಕನ. ಸ್ವಾವಲಂಬಿಗಳಾದಂತೆ ಹೇಗೆ ತಾಯಿಯ ಮಡಿಲಿಂದ ದೂರ ಸರಿಯುತ್ತೇವೆಯೋ ಹಾಗೆಯೇ ಆಧುನಿಕತೆ ಬೆಳೆದಂತೆ ಮಾನವ ನಿಸರ್ಗದ ಮಡಿಲಿಂದ ಖಂಡಿತ ದೂರ ಸರಿಯುತ್ತಿದ್ದಾನೆ. "ಸಂಕ್ರಾಂತಿ" ಕೃಷಿ ಅವಲಂಬಿತ  ಕುಟುಂಬಗಳಿಗೆ ಭೂಮಿಯನ್ನು ವಂದಿಸುವ ದಿನವಾಗಿ ಉಳಿದಿದೆ.

ಸುಗ್ಗಿ ಹಬ್ಬ "ಸಂಕ್ರಾಂತಿ":
ಸಂಕ್ರಾಂತಿಯನ್ನು ಸುಗ್ಗಿ ಹಬ್ಬವೆಂದು ಕರೆಯಲು ಮುಖ್ಯವಾದ ಕಾರಣ "ಕೊಯ್ಲು ಮುಕ್ತಾಯ". ಆದ್ದರಿಂದ ಇದರ ಸಂಭ್ರಮಾಚರಣೆ ಜೋರಾಗಿರುತ್ತದೆ. ಸಂಕ್ರಾಂತಿ ಕೊಯ್ಲು ಮುಕ್ತ್ಯದೊಂದಿಗೆ ಚಳಿಗಾಲದ ಅಂತ್ಯವನ್ನೂ ಸೂಚಿಸುತ್ತದೆ.  ರೈತ ಈ ದಿನ ಎತ್ತು, ದನ, ಬೆಳೆದ ಆಹಾರ ಮತ್ತು ಭೂಮಿಯನ್ನು ದೇವರೆಂದು ಪೂಜಿಸುತ್ತಾನೆ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಆಚರಿಸುವ ಈ ಹಬ್ಬವನ್ನು ಮೊದಲನೇ ದಿನ ಭೂಮಿಗೆ, ಎರಡನೇ ದಿನ ತಮಗೆ ಮತ್ತು ಮೂರನೇ ದಿನ ಜಾನುವಾರುಗಳಿಗೆ ಎಂದು ಸಂಭ್ರಮದಿಂದ ಆಚರಿಸುತ್ತಾರೆ. ಪಟ್ಟಣಕ್ಕೆ ವಲಸೆಗೊಂಡ ಮಾನವರೊಂದಿಗೆ ಹೋಲಿಸಿದಲ್ಲಿ ರೈತಾಪಿ ವರ್ಗ ವರ್ಷದ ಒಂದು ದಿನವನ್ನಾದರೂ ಭೂಮಿ ಮತ್ತು ಪಶು ಪಕ್ಷಿಗಳಿಗೆ ಮೀಸಲಿಡು
ವುದು ಪ್ರಶಂಸನೀಯ.

ಸಂಕ್ರಾಂತಿ ಹಳ್ಳಿಗಳಲ್ಲಿ ಸುಗ್ಗಿಯ ಹಬ್ಬವಾದರೆ, ಪಟ್ಟಣಗಳಲ್ಲಿ ಎಳ್ಳು ಬೀರುವ ಹಬ್ಬವಾಗಿ ಪ್ರಚಲಿತವಾಗಿದೆ. ಎಳ್ಳು ಬೆಲ್ಲವನ್ನು ಹೆಂಗಳೆಯರು ಮನೆ ಮನೆಗೆ ಹೋಗಿ ವಿನಿಮಯಗೊಳಿಸುತ್ತಾರೆ. ಮದುವೆಯಾದ ಹೆಣ್ಣುಮಕ್ಕಳು ಮತ್ತೈದೆಯರಿಗೆ ಬಾಗಿನ ಕೊಟ್ಟು ಹಬ್ಬವನ್ನಾಚರಿಸುತ್ತಾರೆ. ಹುಗ್ಗಿ ಮತ್ತು ವಿಭಿನ್ನ ರಂಗೋಲಿಗಳು ಹಬ್ಬದ ಮತ್ತೊಂದು ವೈಶಿಷ್ಟ್ಯ. ಬಣ್ಣ ಬಣ್ಣದ ಗಾಳಿಪಟಗಳನ್ನು ಹಾರಿಸುವ ಪದ್ದತಿಯಿರುವುದರಿಂದ ಮಕ್ಕಳು ಮತ್ತು ದೊಡ್ಡವರಿಗೆ ಇದೊಂದು ಮನೋರಂಜನೆಯ ಹಬ್ಬ ಕೂಡ.

ಹಬ್ಬ ಯಾವುದೇ ಇರಲಿ, ಅದಕ್ಕೊಂದು ವಿಶೇಷವಿದ್ದೇ ಇರುತ್ತದೆ. ಬರಿ ಆಚರಣೆಯೊಂದೇ ಅಲ್ಲದೆ ಅದರ ವಿಶೇಷತೆಯನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ತಿಳಿದುಕೊಂಡ ವಿಷಯದೊಂದಿಗೆ, ನಮ್ಮ ಆಚಾರ ವಿಚಾರಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ನಮ್ಮ ನಿಮ್ಮೆಲ್ಲರ ಹೆಮ್ಮೆಯ ಜವಾಬ್ದಾರಿ. ಸಂಕ್ರಾಂತಿ ಹಬ್ಬದೊಂದಿಗೆ "ಎಳ್ಳು-ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡೋಣ".

This article bagged first place at "MILANA ADULT ESSAY COMPETITION - 2017"

Thursday, February 23, 2017

Painting : Rule your mind or it will rule you


Monday, December 19, 2016

ಇನ್ನಿಲ್ಲವಾಯಿತೇ ಆ.... ಹಕ್ಕೀ ಗೂಡು.



ಕಾಲವೊಂದಿತ್ತು, ಮಲೆನಾಡಿನ ಮುಚ್ಚಿಗೆ ಮನೆಗಳ ಜಗುಲಿಯಲ್ಲಿ ಒಂದು ಗೂಡಿರುತ್ತಿತ್ತು. ಏಕಿರಬಹುದು ಈ ಗೂಡುಗಳು? ಸದಾ ಚಿಲಿ-ಪಿಲಿ ಕಲರವ ಕೇಳಿಸುವ ಗುಬ್ಬಿಗಳಿಗಾಗಿ. ಹೀಗೆ ಸಾಮಾನ್ಯ ಎಲ್ಲರ ಮನೆಯ ಜಗಲಿಯಲ್ಲಿ ಗುಬ್ಬಿ ಸಪ್ಪಳ ಕೇಳುತ್ತಿತ್ತು. ಇನ್ನು ಮನೆಯೊಡತಿಯೋ, ಮನೆಯೊಡೆಯನೋ ಆಚೀಚೆ ಓಡಾಡುವಾಗ ಜಗುಲಿಯಲ್ಲಿ ಅಕ್ಕಿ ಬೀರುವ ಅಭ್ಯಾಸ.  ಗುಬ್ಬಚ್ಚಿಗಳಿಗೇನು ಕೆಲಸ ಅಕ್ಕಿ ಹೆಕ್ಕಿ ತಿನ್ನುವುದು. ಅದೆಷ್ಟೋ ಭಾರಿ ಗುಬ್ಬಚ್ಚಿ ಮೊಟ್ಟೆಗಳಿಗಾಗಿ ಹಾವುಗಳ ಹಾವಳಿ ಮನೆಯವರಿಗಾದ ಅನುಭವಗಳಿವೆ. ಇತ್ತೀಚಿನ ದಿನಗಳಲ್ಲಿ ನಾವು ಗುಬ್ಬಚ್ಚಿಗಳನ್ನು ಅಷ್ಟೊಂದು ನೋಡುತ್ತಿಲ್ಲ. ಹಾಗಾದರೆ ಗುಬ್ಬಿಗಳೆಲ್ಲ ಎಲ್ಲಿ ಹೋದವು?

ಕಾಲ ಮುಂದುವರಿದಂತೆ, ಆಧುನಿಕತೆ ಹೆಚ್ಚಾಗುತ್ತಿದೆ. ಆಧುನಿಕತೆಯೆಡೆ ದಾಪುಗಾಲಿಡುತ್ತಿರುವ ಮಾನವನಿಗೆ ಗುಬ್ಬಚ್ಚಿ ಕಲರವ ಮರೆತೇ ಹೋಗಿದೆ. ಗುಬ್ಬಚ್ಚಿಯೊಂದೇ ಅಲ್ಲದೆ, ಮುಂಜಾನೆಯ ಕೋಳಿ ಕೂಗು, ಸುಪ್ರಭಾತ, ರೇಡಿಯೋದಲ್ಲಿ ಬರುತ್ತಿದ್ದ ಬೆಳಗಿನ ವಾರ್ತೆಗಳು, ಮನೆ ಹೊರಗೆ ಹಸುವಿಗೆ ಕುಡಿಯಲೆಂದೇ ಶೇಖರಿಸುತ್ತಿದ್ದ ಬಾನಿಯೊಳಗಿನ ನೀರು ಒಂದೇ, ಎರಡೇ? ಅವೆಲ್ಲ ಇಂದಿಗೆ ನೆನಪುಗಳಗಷ್ಟೇ ಆಗಿ ಉಳಿದಿವೆ.

ಗುಬ್ಬಚ್ಚಿಗಳು ಬರೀ ಮಲೆನಾಡು ಅಥವಾ ಭಾರತಕ್ಕಷ್ಟೇ ಸೀಮಿತವಲ್ಲದೆ, ಪ್ರಪಂಚದ ಹಲವಾರು ಭಾಗಗಳಲ್ಲಿ ನಾವು ಕಾಣಬಹುದು. ಗುಬ್ಬಚ್ಚಿ ಅಥವಾ ಸ್ಪ್ಯಾರೋಗಳಲ್ಲಿ (ಆಂಗ್ಲ ಭಾಷೆಯಲ್ಲಿ) ಹಲವಾರು ವಿಧಗಳಿವೆ. ಪ್ರದೇಶ, ವಾಸಕ್ಕನುಗುಣವಾದ ಹವಾಮಾನ ಮತ್ತು ದೇಹ ರಚನೆಗನುಗುಣವಾಗಿ ಹಲವಾರು ಹೆಸರುಗಳಲ್ಲಿ ವಿಂಗಡಿಸಲಾಗಿದೆ. ಹೌಸ್ ಸ್ಪ್ಯಾರೋ, ಇಟಾಲಿಯನ್ ಸ್ಪ್ಯಾರೋ, ಸ್ಪ್ಯಾನಿಷ್ ಸ್ಪ್ಯಾರೋ, ಸಿಂದ್ ಸ್ಪ್ಯಾರೋ, ರುಸ್ಸೆಟ್ ಸ್ಪ್ಯಾರೋ, ಡೆಡ್ ಸೀ ಸ್ಪ್ಯಾರೋ, ಕೀನ್ಯಾ ಸ್ಪ್ಯಾರೋ, ಪ್ಯಾರೋಟ್ ಬಿಲ್ಲ್ಡ್ ಸ್ಪ್ಯಾರೋ ಹೀಗೆ ಹತ್ತು ಹಲವು.
ವೈಜ್ಞಾನಿಕ ವಿಂಗಡನೆ
Kingdom: Animalia
Phylum:        Chordata
Class:        Aves
Order:        Passeriformes
Suborder:        Passeri
Infraorder: Passerida
Superfamily: Passeroidea
Family:        Passeridae

ಗುಬ್ಬಚ್ಚಿಗಳ ಪ್ರಭೇದಗಳು ಈ ಕೆಳಕಂಡಂತಿವೆ:
Hypocryptadius
Cinnamon ibon
Passeridae, (true sparrows)
Saxaul sparrow, Passer ammodendri
House sparrow, Passer domesticus
Italian sparrow, Passer italiae
Spanish sparrow, Passer hispaniolensis
Sind sparrow, Passer pyrrhonotus
Somali sparrow, Passer castanopterus
Russet sparrow, Passer rutilans
Plain-backed sparrow, Passer flaveolus
Dead Sea sparrow, Passer moabiticus
Iago sparrow, Passer iagoensis
Great sparrow, Passer motitensis
Kenya sparrow, Passer rufocinctus
Kordofan sparrow, Passer cordofanicus
Shelley's sparrow, Passer shelleyi
Socotra sparrow, Passer insularis
Abd al-Kuri sparrow, Passer hemileucus
Cape sparrow, Passer melanurus
Northern grey-headed sparrow, Passer griseus
Swainson's sparrow, Passer swainsonii
Parrot-billed sparrow, Passer gongonensis
Swahili sparrow, Passer suahelicus
Southern grey-headed sparrow, Passer diffusus
Desert sparrow, Passer simplex
Eurasian tree sparrow, Passer montanus
Sudan golden sparrow, Passer luteus
Arabian golden sparrow, Passer euchlorus
Chestnut sparrow, Passer eminibey
Petronia, the petronias (rock sparrows)
Yellow-spotted petronia, Petronia pyrgita
Yellow-throated sparrow, Petronia xanthocollis
Yellow-throated petronia, Petronia superciliaris
Bush petronia, Petronia dentata
Rock sparrow, Petronia petronia
Carpospiza
Pale rockfinch, Carpospiza brachydactyla
Montifringilla, (snowfinches)
White-winged snowfinch, Montifringilla nivalis
Black-winged snowfinch, Montifringilla adamsi
White-rumped snowfinch, Montifringilla taczanowskii
Père David's snowfinch, Montifringilla davidiana
Rufous-necked snowfinch, Montifringilla ruficollis
Plain-backed snowfinch, Montifringilla blanfordi
Afghan snowfinch, Montifringilla theresae



ಸದ್ದಿಲ್ಲದೇ ಮರೆಯಾಗುತ್ತಿರುವ ಈ ಪುಟ್ಟ ಪಕ್ಷಿಗಳು ಬರೀ ಭಾರತವೊಂದೇ ಅಲ್ಲದೆ ಎಲ್ಲ ಪ್ರದೇಶಗಳಲ್ಲೂ ಮಾಯವಾಗುತ್ತಿವೆ. RSPB, UK ಹೌಸ್ ಸ್ಪ್ಯಾರೋಗಳನ್ನಂತೂ ಪ್ರಪಂಚದ ವಿನಾಶದಂಚಿನಲ್ಲಿರುವ ೩೯ ಪಕ್ಷಿಗಳ ಸಾಲಿನಲ್ಲಿ ಸೇರಿಸಿಬಿಟ್ಟಿದೆ. ಜರ್ಮನ್ ಅಧ್ಯನದ ಪ್ರಕಾರ ಹ್ಯಾಂಬರ್ಗ್ನಲ್ಲಿ ಮೂವತ್ತು ವರ್ಷಗಳೀಚೆ ಗುಬ್ಬಿಗಳ ಸಂಖ್ಯೆ  ಅರ್ಧಕ್ಕಿಳಿದಿದೆ. ಹಲವಾರು ಪಕ್ಷಿಶಾಸ್ತ್ರಜ್ಞರು "Common bird goes uncommon" ಎನ್ನುವ ವಿಷಯದಡಿ ಕೆಲಸ ಮಾಡುತ್ತಿದ್ದಾರೆ. ಅಧ್ಯಯನ ಮತ್ತು ಅಧ್ಯಯನಿಗಳು ಎಷ್ಟೇ ಹೆಚ್ಚಿದರೂ ಹತ್ತಾರು ವರ್ಷಗಳೀಚೆ ಇಳಿಯುತ್ತಿರುವ ಗುಬ್ಬಚ್ಚಿಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ. ನಶಿಸಲು ನೂರಾರು ಕಾರಣಗಳಿರಬಹುದು ಎಂದು ಊಹಿಸಿದರೂ, ನಿಜವಾದ ಕಾರಣ ಮಾತ್ರ ಇಂದಿಗೂ ರಹಸ್ಯ.
ಅಧ್ಯಯನಗಳ ಪ್ರಕಾರ ಗುಬ್ಬಚ್ಚಿಗಳು ನಶಿಸಿಹೋಗಲು ಮುಖ್ಯ ಕಾರಣಗಳೇನು?
೧. ಅತಿಯಾದ ಕೀಟನಾಶಕಗಳ ಬಳಕೆಯಿಂದ ಗುಬ್ಬಿಗಳ ಆಹಾರ ಪೂರೈಕೆಯ ಕೊರತೆ.
೨. ಅರಣ್ಯನಾಶದಿಂದಾಗಿ ಗೂಡು ಕಟ್ಟುಲು ಸ್ಥಳದ ಕೊರತೆ.
೩. ಅತಿಯಾದ ಸೆಲ್ ಫೋನ್ ಬಳಕೆಯಿಂದುಂಟಾದ ವಿದ್ಯುತ್ಕಾಂತೀಯ ಮಾಲಿನ್ಯ (Electromagnetic Contamination)
೪. ಹೆಚ್ಚಾದ ಗುಬ್ಬಚ್ಚಿ ಪರಭಕ್ಷಕ ಪ್ರಾಣಿಗಳ ಸಂಖ್ಯೆ - ಬೆಕ್ಕು, ಗಿಡುಗ, ಹಾವು ಮುಂತಾದವುಗಳು.
೫. ಮಾನವರ ಮಣ್ಣಿನ ಮನೆಗಳಿಂದ ಸಿಮೆಂಟ್ ಕಟ್ಟಡಗಳ ವಲಸೆ.

ಕಾರಣಗಳೆಷ್ಟೇ ಇರಲಿ, ಅದರಲ್ಲಿ ಮಾನವನ ಆಧುನಿಕತೆಯಿಂದಾಗಿ ನೈಸರ್ಗಿಕ ಅಸಮತೋಲನ ಉಂಟಾಗಿರುವುದೇ ಹೆಚ್ಚು. ಮುನ್ನುಗ್ಗುತ್ತಿರುವ ಮಾನವನರಿಗೆ ಹಿಂದಾಗಿರುವುದು, ಗಳಿಸುತ್ತಿರುವ ಮಾನವರಿಗೆ ಕಳೆದುಕೊಂಡಿದ್ದು ನಿಜವಾಗಿಯೂ ತಿಳಿಯುತ್ತಿಲ್ಲ. ಇದು ಒಂದು ಮನುಷ್ಯ ಯೋಚಿಸಿ, ತೆಗೆದುಕೊಳ್ಳಬೇಕಾದ ನಿರ್ಧಾರವಲ್ಲ. ಇಡೀ ಮಾನವ ಸಂಕುಲವೇ ಹಿಂದಿರುಗಿ ನೋಡಬೇಕಿದೆ. ಇಂದು ಮಾನವನ ಅವಿವೇಕಿ ಬುದ್ದಿಯಿಂದ ಗುಬ್ಬಚ್ಚಿಗಳು ನಶಿಸುತ್ತಿವೆ, ನಾಳೆ ನಾವೇ. ಏಕೆಂದರೆ ಮೇಲೆ ತಿಳಿಸಿದ ಕಾರಣಗಳು ನಮಗೂ ಹಾನಿಕಾರಕವಲ್ಲವೇ? ಕೀಟನಾಶಕಗಳು ನಮಗೂ ಕೂಡ ವಿಷ. ಅರಣ್ಯ ನಾಶದಿಂದ ನಮಗೂ ಒಂದಲ್ಲ ಒಂದು ದಿನ ತೊಂದರೆಯಿದೆ. ಸೆಲ್ ಫೋನ್ ಬಳಕೆ ನಮ್ಮ ಜೀವ ಕೋಶಗಳ ಮೇಲೂ ಅತಿಯಾದ ಹಾನಿಯುಂಟು ಮಾಡುತ್ತವೆ. ಮುಂದುವರಿದ ನಮಗೆ ಹಿಂದಂತೂ ಹೋಗಲಸಾಧ್ಯ. ಸ್ವಲ್ಪ ಮಟ್ಟಿನ ಜಾಗ್ರತೆಯಿಂದ ನಾವು ಉಳಿದು ನಮ್ಮೊಡನಿರುವ ನಿಸರ್ಗವನ್ನೂ ಉಳಿಸಿಕೊಳ್ಳಬಹುದು.

This article was published in TimesKannada news paper http://timeskannada.com/?p=10611


Friday, December 9, 2016

ಸಾವಿರ ಸರೋವರಗಳ ನಾಡು - “ಫಿನ್ಲ್ಯಾಂಡ್” !



ಹೆಸರೇ ಹೇಳುವಂತೆ ಇದು "ಸಾವಿರ ಸರೋವರಗಳ ನಾಡು". ಇಲ್ಲಿ ಪ್ರಕೃತಿ, ಸರೋವರಗಳ ರೂಪದಲ್ಲಿ ಬಿಂಬಿಸಲ್ಪಟ್ಟಿದೆ. ಅದುವೇ "ಫಿನ್ಲ್ಯಾಂಡ್". ಫಿನ್ಲ್ಯಾಂಡ್ ಯೂರೋಪ್ ನಲ್ಲಿರುವ ಒಂದು ದೇಶ. ವಿಸ್ತೀರ್ಣದಲ್ಲಿ ಸುಮಾರು ಮೂರು ಲಕ್ಷ square ಕಿಲೋಮೀಟರು ಇರುವ ಈ ದೇಶ, ಹೆಚ್ಚು-ಕಡಿಮೆ ೫೫ ಲಕ್ಷ ಜನ ಸಂಖ್ಯೆ ಹೊಂದಿದೆ. ಹೆಲ್ಸಿಂಕಿ ಇಲ್ಲಿನ ರಾಜಧಾನಿ. ಫಿನ್ಲ್ಯಾಂಡ್ ೧೯೧೭ ರಲ್ಲಿ ಸ್ವಾತಂತ್ರ ಪಡೆಯಿತು. ಫಿನ್ನಿಷ್ ಮತ್ತು ಸ್ವೀಡಿಷ್ ಇಲ್ಲಿನ ರಾಷ್ತ್ರೀಯ ಭಾಷೆಗಳಾದರೆ, ಸ್ಯಾಮಿ ಪ್ರಾದೇಶಿಕ ಭಾಷೆಯಾಗಿದೆ.

 ಫಿನ್ಲ್ಯಾಂಡನ್ನು ಏಕೆ "ಸಾವಿರ ಸರೋವರಗಳ ನಾಡು" ಎನ್ನುತ್ತಾರೆ? : ವಿಸ್ತೀರ್ಣಕ್ಕೆ ಹೋಲಿಸಿದಾಗ ಸುಮಾರು ಒಂದೂವರೆ ಲಕ್ಷ ಸರೋವರಗಳು ಈ ದೇಶದಲ್ಲಿ ಹೆಚ್ಚಿವೆ. ಪ್ರಪಂಚದ ಇನ್ನುಳಿದ ಯಾವುದೇ ದೇಶದಲ್ಲಿ ಈ ಅನುಪಾತ ನೋಡಲಸಾಧ್ಯ. ಇದರರ್ಥ ಹೆಚ್ಚು-ಕಡಿಮೆ ಇಲ್ಲಿನ ಪ್ರತೀ ಇಪ್ಪತ್ತಾರು ಜನರಿಗೆ ಒಂದು ಸರೋವರವಿದ್ದಂತೆ.  ಸರೋವರಗಳು ಸಾಮಾನ್ಯವಾಗಿ ಉತ್ತರದ Kuopio ಇಂದ ದಕ್ಷಿಣದ Lahtiವರೆಗೆ ಪಶ್ಚಿಮದ Tampere ಇಂದ ಉತ್ತರದ Punkaharju ಮತ್ತು ರಷ್ಯನ್ ಗಡಿವರೆಗೆ ಹರಡಿವೆ.

ಮತ್ತೊಂದು ವಿಸ್ಮಯದ ಸಂಗತಿಯೆಂದರೆ, ಸರೋವರಗಳೆಲ್ಲೆಲ್ಲಿವೆಯೋ ಅಲ್ಲೆಲ್ಲ ಸುಂದರ ಮರಗಳರಿರುವ ಕಾಡುಗಳು. ಫಿನ್ಲ್ಯಾಂಡನ ಕಾಡುಗಳಲ್ಲಿ pine, spruce ಮತ್ತು birch ಮರಗಳಷ್ಟೇ ಕಾಣಸಿಗುತ್ತವೆ. ಬಹುಶಃ ಪ್ರಪಂಚದಲ್ಲಿ ಫಿನ್ಲ್ಯಾಂಡ್ ಒಂದೇ ದೇಶದಲ್ಲಿ ಮಾತ್ರ ಮರಗಳು ಕಾಡಿಗೆ ಮಾತ್ರವಲ್ಲದೆ, ಸರೋವರಗಳಿಗೂ ಸೀಮಿತವಾಗಿರುವುದನ್ನು ಕಾಣಬಹುದು. ಪ್ರಪಂಚದಲ್ಲಿ ಅತೀ ಹೆಚ್ಚು ಮರಗಳಿರುವ ರಾಷ್ಟ್ರಗಳಲ್ಲಿ ಫಿನ್ಲ್ಯಾಂಡ್ ಮುಖ್ಯವಾದದ್ದು (ವಿಸ್ತೀರ್ಣ ಮತ್ತು ಮನುಷ್ಯರ ಅನುಪಾತಕ್ಕನುಗುಣವಾಗಿ). ಫಿನ್ನಿಷ್ ಸೌಂದರ್ಯ ಸರೋವರ, ಮರಗಳಲ್ಲೊಂದೇ ಅಲ್ಲದೆ ಇಲ್ಲಿನ ಮರದ ದಿನ್ನೆಗಳಿಂದ ಮಾಡಿದ ಮನೆಗಳು, ಬೇಸಿಗೆಯ ಕುಟೀರಗಳು, ದೋಣಿಗಳು, ಕರಕುಶಲ ವಸ್ತುಗಳೂ ಎತ್ತಿ ತೋರುತ್ತವೆ.

ಸಾರ್ವಜನಿಕ ಪ್ರವೇಶ ಎಲ್ಲಾ ಸರೋವರ, ಕಾಡು ಮತ್ತು ಹೊರ ಪ್ರದೇಶಗಳಿಗೆ ನೀಡಿರುವದರಿಂದ, ಇದನ್ನು "everyman's rights" ಎಂದು ಕರೆಯುತ್ತಾರೆ.  ಫಿನ್ಲ್ಯಾಂಡ್ ನ ಸೌಂದರ್ಯವನ್ನು ಸವಿಯಲು ಮತ್ತೊಂದು ಆಯ್ಕೆಯೆಂದರೆ Kuopioಗೆ ಭೇಟಿ ಕೊಡುವುದು. ಇಲ್ಲಿನ ೨೪೬ ಅಡಿ ಎತ್ತರದ Puijo ಟವರ್ ಫಿನ್ಲ್ಯಾಂಡ್ ನ್ನು ವಸ್ತು ಸಂಗ್ರಹಾಲಯದ ವಸ್ತುವಿನಂತೆ ಪ್ರತಿಬಿಂಬಿಸುತ್ತದೆ. ಹಸಿರು ಕಾರ್ಪೆಟ್ಟಿನ ಮೇಲೆ ಗಾಜಿನಂತೆ ಸರೋವರಗಳು ಕಾಣುತ್ತವೆ. ಇದೊಂದು ಕಣ್ಣಿಗೆ ಮುದ ನೀಡುವ ಸ್ಥಳ.

ಇನ್ನು ವಿಸ್ತೀರ್ಣದ ಪ್ರಕಾರ ಸೂರ್ ಸೈಮಾ ಸರೋವರ ಅತೀ ದೊಡ್ಡದಾಗಿದೆ. ಇದು ಫಿನ್ಲ್ಯಾಂಡಿನ ಆಗ್ನೇಯ ಭಾಗದಲ್ಲಿದೆ. ಇದರ ವಿಸ್ತೀರ್ಣ ಸುಮಾರು ೪೪೦೦ ಸ್ಕ್ವೇರ್ ಕಿಲೋಮೀಟರ್ಗಳು. ಇದು ಯೂರೋಪಿನ ನಾಲ್ಕನೇ ದೊಡ್ಡ ಸರೋವರ ಕೂಡ. Päijänne ಸರೋವರ ಎರಡನೇ ದೊಡ್ಡ ಸರೋವರವಾಗಿದ್ದು, Inari ಮತ್ತು Pielinen ಸರೋವರಗಳು ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿವೆ.

ಇನ್ನು ಈ ಪ್ರಕೃತಿ ಸೌಂದರ್ಯಕ್ಕೆ ಮುಖ್ಯ ಕಾರಣ, ಭೂಮಂಡಲದಲ್ಲಿ ಫಿನ್ಲ್ಯಾಂಡ್ ಇರುವ ಸ್ಥಳ. ಇದು ಬೋರಿಯಲ್ ವಲಯಕ್ಕೆ ಸೇರಲ್ಪಡುತ್ತದೆ. ಇಲ್ಲಿನ ಬೇಸಿಗೆ ಸಾಮಾನ್ಯದ್ದಾಗಿರುತ್ತದೆಯಾದರೂ, ಚಳಿಗಾಲ ಮಾತ್ರ ಘನ ಘೋರ. ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಹವಾಮಾನ ವ್ಯತ್ಯಾಸ ಬಹಳಷ್ಟಿದೆ. ಫಿನ್ಲ್ಯಾಂಡ್ ಅಟ್ಲಾಂಟಿಕ್ ಸಮುದ್ರಕ್ಕೆ ಬಹಳ ಹತ್ತಿರವಿದ್ದು ಇಲ್ಲಿನ ಕೊಲ್ಲಿಗಳಿಂದಾಗಿ ಬೆಚ್ಚನೆಯ ಗಾಳಿ ಬೀಸುತ್ತಿರುತ್ತದೆ. ದಕ್ಷಿಣ ಫಿನ್ಲ್ಯಾಂಡಿನಲ್ಲಿ ಸಾಮಾನ್ಯವಾಗಿ ನೂರು ದಿನಗಳ ಕಾಲ ಅತೀ ಚಳಿಗಾಲವಿರುತ್ತದೆ. ಹೆಲ್ಸಿನ್ಕಿಯಲ್ಲಿ ಸಾಮಾನ್ಯವಾಗಿ ನವೆಂಬರ್ ಕೊನೆಯಿಂದ ಮಾರ್ಚ್ ತನಕ ಹಿಮ ಬೀಳುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ -೩೦ ಡಿಗ್ರಿ ಸಿ ತನಕ ಚಳಿ ಇರುತ್ತದೆ. ಉತ್ತರ ಫಿನ್ಲ್ಯಾಂಡಿನಲ್ಲಿ ಸಾಮಾನ್ಯವಾಗಿ ೨೦೦ ದಿನಗಳ ಕಾಲ ಚಳಿಗಾಲವಿರುತ್ತದೆ. ಇಲ್ಲಿ ಅಕ್ಟೋಬರ್ ಇಂದ ಮೇ ಕೊನೆಯ ತನಕ ಹಿಮ ಬೀಳುತ್ತದೆ.

ಪ್ರಯಾಣಿಕರಿಗೆ ಫಿನ್ಲ್ಯಾಂಡ್ ಒಂದು ಅದ್ಬುತ ಅನುಭವ ಕೊಡುವಂತಹ ದೇಶ. ಪ್ರಕೃತಿ ಸೌಂದರ್ಯದ ತವರೂರು. ಬೇಸಿಗೆ ಅಂತಹ ಹೆಚ್ಚಾಗಿಲ್ಲದೆ ಇರುವುದರಿಂದ ಹಲವಾರು ಕ್ರೀಡೇಗಳಿಗೆ ಕೂಡ ಆಸ್ಪದವಿದೆ. ದೂರದ ದೇಶದ ಪ್ರಯಾಣ ನಿಮ್ಮ ಕನಸಾಗಿದ್ದರೆ, ಫಿನ್ಲ್ಯಾಂಡನ್ನು ನಿಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು.

This article was published in TimesKannada news paper http://timeskannada.com/?p=10070


Monday, November 21, 2016

ಕಣ್ಮನ ಸೆಳೆಯುವ, ಕಾಮನಬಿಲ್ಲಿನ ರಹಸ್ಯದ ಹಿಂದೆ ... !!


ಪ್ರತಿಯೊಬ್ಬ ಮನುಷ್ಯನಿಗೂ ಅತೀ ಮಧುರ ನೆನಪುಗಳೆಂದರೆ ಬಾಲ್ಯದ ದಿನಗಳು. ಎಲ್ಲರ ಬಾಲ್ಯವೂ ಮರೆಯಲಾಗದ ಜೀವನದ ಅಂಗ. ಬಾಲ್ಯವೆಂದರೆ ವರ್ಣರಂಜಿತ. ಹೀಗೆ ಬಾಲ್ಯದಲ್ಲಿ ಕಿವಿ ತುಂಬಿದ ಹಾಡುಗಳಲ್ಲಿ "ಕಾಮನ ಬಿಲ್ಲಿನ ಮೇಲೆ ಓಡುತ ಸಾಗುವ ರೈಲಿದೆ.. ಜಿಗಿ ಜಿಗಿ ಜಿಗಿ ಜೂ ... ಕುಕ್ಕೂ.. " ಕೂಡ ಒಂದು. ಬಾಲ್ಯಕ್ಕೂ- ಕಾಮನಬಿಲ್ಲಿಗೂ ಅವಿನಾಭಾವ ಸಂಬಂಧ. ಅದೆಷ್ಟೋ ದಿನಗಳು ಕಾಮನಬಿಲ್ಲು ಕಟ್ಟಲು ಕಾದಿದ್ದಿದೆ. ಕಾಮನಬಿಲ್ಲು ಕಟ್ಟಿದಾಗ ಕುಣಿದು ಕುಪ್ಪಳಿಸಿ ಪ್ರಪಂಚದ ಅದ್ಭುತಗಳನ್ನು ಕಂಡಷ್ಟು ಖುಷಿಪಟ್ಟಿದ್ದಿದೆ. ಬೆಳೆಯುವಾಗ ಅನೇಕ ಭಾರಿ ಈ ಪ್ರಕೃತಿ ವಿಸ್ಮಯದ ಹಿಂದೆ ಏನಿದೆ ಎಂದು ಮನಸಿನಲ್ಲಿ ನೂರೆಂಟು ಪ್ರಶ್ನೆಗಳು ಮೂಡಿದ್ದಿದೆ. ಏನಿರಬಹುದು ಈ ಕಾಮನ ಬಿಲ್ಲಿನ ರಹಸ್ಯ ?


ಬೆಳಕು (ಬಿಳಿ) ಹಲವಾರು ಬಣ್ಣಗಳ (ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲಿ, ವಜ್ರ ನೀಲಿ ಮತ್ತು ನೇರಳೆ) ಮಿಶ್ರಣ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಆದ್ದರಿಂದಲೇ ಪ್ರಿಸಂನಲ್ಲಿ ನಾವು ಬಿಳಿ ಬೆಳಕನ್ನು ಹರಿ ಬಿಟ್ಟಾಗ, ಏಳು ಬಣ್ಣಗಳಾಗಿ ಹೊರ ಹೊಮ್ಮುತ್ತದೆ.  ಹಾಗಾದರೆ ಬಿಳಿ ಬಣ್ಣದ ಬಗ್ಗೆ ತಿಳಿಯುವ ಮುನ್ನ "ಪ್ರಿಸಂ"ನಲ್ಲಿ ಬಣ್ಣಗಳು ಬೇರೆ ಬೇರೆಯಾಗಿ ಹೊರ ಹೊಮ್ಮಲು ಏನು ಕಾರಣ?


"ಪ್ರಿಸಂ" ಒಂದು ತ್ರಿಭುಜಾಕೃತಿಯ ಗಾಜು ಅಥವಾ ಪ್ಲಾಸ್ಟಿಕ್ ತುಂಡು. ಬಣ್ಣಗಳು ಬೇರೆ ಬೇರೆಯಾಗಲು ಗಾಜಿನ ವಕ್ರೀಕರಣ ಸೂಚಿ (Refractive Index ಅಥವಾ RI ) ಕಾರಣ. ಪ್ರತಿಯೊಂದು ವಸ್ತುವಿಗೂ ಬೇರೆ ಬೇರೆ RI ಗಳಿರುತ್ತವೆ. ಗಾಳಿ ಮತ್ತು ಗಾಜಿನ RI ಗಳು ಬೇರೆ ಬೇರೆ ಯಾಗಿರುವದರಿಂದ ಬೆಳಕು ಬಾಗಲು (bend) ಕಾರಣವಾಗುತ್ತವೆ. ಈ ಬಾಗುವ ಕೋನವು (Refraction Angle) ಬೇರೆ ಬೇರೆ ತರಂಗಗಳ ಬೆಳಕಿನ ಕಿರಣಗಳಿಗೆ ಬೇರೆ ಬೇರೆಯದ್ದಾಗಿರುತ್ತದೆ. ಬೆಳಕು ಪ್ರಿಸಂನ ಎರಡು ಮುಖಗಳ ಮೂಲಕ ಹರಿದಾಗ ಬೇರೆ ಬೇರೆ ಬಣ್ಣಗಳು ಬೇರೆ ಬೇರೆ ಪ್ರಮಾಣದಲ್ಲಿ ಬಾಗಲ್ಪಡುತ್ತವೆ. ಆದುದರಿಂದಲೇ ಪ್ರಿಸಂನಿಂದ ಸಣ್ಣದೊಂದು ಕಾಮನಬಿಲ್ಲು ಹೊರಹೊಮ್ಮುತ್ತದೆ.  

ಕಾಮನಬಿಲ್ಲಿನ ರಹಸ್ಯ - ಕಾಮನಬಿಲ್ಲಿನ ಸೃಷ್ಟಿಯಲ್ಲಿ ಗಾಳಿಯಲ್ಲಿರುವ ಮಳೆ ಹನಿಗಳು ಚಿಕ್ಕ ಚಿಕ್ಕ ಪ್ರಿಸಂಗಳಾಗಿ ವರ್ತಿಸುತ್ತವೆ. ಮಳೆ ಹನಿಗಳ ಗಾತ್ರ ಬೇರೆಯದ್ದಾದರೂ, ನಿರ್ವಹಿಸುವ ಕೆಲಸ ಮಾತ್ರ ಪ್ರಿಸಂನದ್ದಾಗಿರುತ್ತದೆ. ಬಿಳಿ ಬೆಳಕು ನೀರಿನ ಹನಿಯೊಳಗೆ ಹರಿದು ಏಳು ಬಣ್ಣಗಳಾಗಿ ಹೊರ ಹೊಮ್ಮುತ್ತದೆ. ಕಾಮನಬಿಲ್ಲು ಮೂಡುವ ಕಾರ್ಯದಲ್ಲಿ ಪ್ರತಿಯೊಂದು ಮಳೆ ಹನಿಯೂ ಕೂಡ ಪ್ರಿಸಂನ ಕೆಲಸ ನಿರ್ವಹಿಸುತ್ತದೆ. ಮಳೆ ಹನಿಯೊಳಗೆ ಬರುವ ಮತ್ತು ಹೊರಹೊಮ್ಮುವ ಕೋನವು ಕೆಂಪುಬಣ್ಣಕ್ಕೆ ೪೨ ಡಿಗ್ರಿಯಿದ್ದರೆ, ನೇರಳೆ ಬಣ್ಣಕ್ಕೆ ೪೦ ಡಿಗ್ರಿಯಾಗಿರುತ್ತದೆ. ಇನ್ನುಳಿದ ಬಣ್ಣಗಳ ಕೋನಗಳು ಇವೆರಡರ ನಡುವಿನಲ್ಲಿರುತ್ತವೆ. 
ಹಲವಾರು ಬಾರಿ ನಾವು ಎರಡೆರಡು ಕಾಮನಬಿಲ್ಲನ್ನು ನೋಡಿದ್ದಿದೆ. ಮಳೆ ಹನಿಗಳ ಒಳಗೆ ಎರಡು ಪ್ರತಿಬಿಂಬಗಳುಂಟಾದಾಗ ಇವು ಹುಟ್ಟುತ್ತದೆ. ಮಳೆ ಹನಿಗಳ ಗಾತ್ರ ಸರಿಯಾಗಿರಬೇಕಷ್ಟೆ.  


ವೈಜ್ಞಾನಿಕವಾಗಿ ಏನೇ ಕಾರಣಗಳಿದ್ದರೂ, ಕಾಮನಬಿಲ್ಲು ಬಣ್ಣಗಳ ಲೋಕವನ್ನೇ ಸೃಷ್ಟಿ ಮಾಡುವದಂತೂ ನಿಜ. ಭೂಮಿಯಿಂದ ಬಾನಿಗೆ ಏಣಿ ಹಾಕಿದ ಭಾವನೆ. 

This article was published in TimesKannada news paper http://timeskannada.com/?p=9321


Wednesday, November 2, 2016

ಮೋಹಕ ಬಣ್ಣದ, ಪುಷ್ಪ ಲೋಕದ ಸುಂದರಿ - ಮುತ್ತುಗ



ನಮ್ಮಲ್ಲಿ ಅನೇಕರಿಗೆ "ಮುತ್ತುಗ" ಅಥವಾ "ಮತ್ತುಗ" ಹೆಸರೇ ಹೊಸದು. ಮಲೆನಾಡಿನವರಿಗೆ ಇದರ ಕಲ್ಪನೆ ಸ್ವಲ್ಪ ಬರಬಹುದು. ಆದರೆ ಮುತ್ತುಗದ ಹೂ ಭಾರತದ ಎಲ್ಲ ದಿಕ್ಕುಗಳಲ್ಲೂ ಕಾಣಲ್ಪಡುತ್ತದೆ. ಬೆಂಗಳೂರಿನಲ್ಲೂ ಹಲವಾರು ಕಡೆ ಮುತ್ತುಗದ ಹೂ ಕಾಣಸಿಗಬಹುದು. ಹಾಗಾದರೆ "ಮುತ್ತುಗ"ದ ಹೂ ಹೇಗಿರಬಹುದು? 

ಮುತ್ತುಗ ಉಷ್ಣವಲಯ ಮತ್ತು ಉಪೋಷ್ಣವಲಯಗಳಲ್ಲಿ ಕಾಣ ಸಿಗುವಂತಹ ಹೂ. ಸಾಮಾನ್ಯವಾಗಿ ಇದು ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್, ಇಂಡೋನೇಷ್ಯಾ ಮತ್ತು ಆಫ್ರಿಕಾದ ಕೆಲ ದೇಶಗಳಲ್ಲಿ ಕಂಡು ಬರುತ್ತದೆ. ಕೇಸರಿ ಬಣ್ಣದ ಈ ಚೆಲುವೆಗೆ ಕಾಡಿನ ಬೆಂಕಿ ಮತ್ತು ಬಾಸ್ಟರ್ಡ್ ಟೀಕ್ ಎಂತಲೂ ಕರೆಯುತ್ತಾರೆ. ಸಾಮಾನ್ಯವಾಗಿ ಇಂಗ್ಲೀಷನಲ್ಲಿ "Parrot Tree" ಎಂದು ಕರೆಲ್ಪಡುವ ಮುತ್ತುಗದ ಮರಕ್ಕೆ ಸಸ್ಯಶಾಸ್ತ್ರೀಯ ಕುಟುಂಬ ಹಾಗೂ ವಿಂಗಡನೆ ಈ ಕೆಳಗಂಡಂತಿದೆ: 

ವೈಜ್ಞಾನಿಕ ವಿಂಗಡನೆ(Scientific classification)
Kingdom: Plantae
Order: Fabales
Family: Fabaceae
Genus: Butea
Species: B. monosperma

Binomial name
Butea monosperma

ಭಾರತಕ್ಕೂ- ಮತ್ತುಗಕ್ಕೂ ಅವಿನಾಭಾವ ಸಂಬಂಧ:

ಹಿಂದೂ ಪುರಾಣದ ಪ್ರಕಾರ ಮತ್ತುಗದ ಮರವು ಅಗ್ನಿ ದೇವನ ರೂಪ. ಪಾರ್ವತಿ ಮತ್ತು ಪರಶಿವನ ಏಕಾಂತಕ್ಕೆ ಭಂಗಪಡಿಸದ್ದಕ್ಕೆ ಅಗ್ನಿ ದೇವನಿಗೆ ಪಾರ್ವತಿ ಕೊಟ್ಟ ಶಾಪವಿದು ಎಂಬ ನಂಬಿಕೆಯಿದೆ. 

ಮುತ್ತುಗದ ಹೂವಿಗೂ ವಸಂತಕ್ಕೂ ಅವಿನಾಭಾವ ಸಂಬಂಧ. ಸಾಮಾನ್ಯವಾಗಿ ಜನವರಿ ಅಂತ್ಯ - ಫೆಬ್ರುವರಿ ಸಮಯದಲ್ಲಿ ಹೂ ಬಿಡುವ ಕಾಲ. ಪಶ್ಚಿಮ ಬಂಗಾಳದಲ್ಲಿ ಇದನ್ನು ಪಲಶಿ ಎಂದು ಕರೆಯುತ್ತಾರೆ. ರಾಬಿನ್ದ್ರನಾಥ್ ಠಾಗೋರ್ರವರು, ಅವರ ಹಲವಾರು ಪದ್ಯಗಳಲ್ಲಿ ಮತ್ತುಗದ ಹೂವಿನ ಉಲ್ಲೇಖ ಕೊಟ್ಟಿದ್ದಾರೆ. ಜಾರಖಾಂಡ್ ರಾಜ್ಯದಲ್ಲಿ ಮತ್ತುಗಕ್ಕೂ-ಜನಪದಕ್ಕೂ ಹತ್ತಿರದ ಸಂಬಂಧ. ಈ ರಾಜ್ಯದ ಹಲವಾರು  ಜಾನಪದ ಕಥೆಗಳಲ್ಲಿ ಕಾಡಿನ ಬೆಂಕಿ ಎಂದು ಮುತ್ತುಗದ ಉಲ್ಲೇಖವಿದೆ. ಇಲ್ಲಿನ ಕಾಡುಗಳು ಸೌಂದರ್ಯಯುತವಾಗಿ ಕಾಣಿಸುವುದೇ ಬೇರೆಲ್ಲ ಮರಗಳು ಬರಿದಾದಾಗ, ಮುತ್ತುಗ ಮೈ ತುಂಬಿದಾಗ. ಮುತ್ತುಗ ಜಾರಖಾಂಡ್ ರಾಜ್ಯ ಹೂ ಆಗಿದೆ. ತೆಲಂಗಾಣ ರಾಜ್ಯದಲ್ಲಿ ಇದು ಶಿವರಾತ್ರಿ ಪೂಜೆಯಲ್ಲಿ ಉಪಯೋಗಿಸಲ್ಪಡುವ ವಿಶೇಷ ಹೂ. ಕರ್ನಾಟಕದಲ್ಲಿ ಇದನ್ನು ರಥಸಪ್ತಮಿಯ ಪೂಜೆಗಳಲ್ಲಿ ವಿಶೇಷವಾಗಿ ಉಪಯೋಗಿಸಲಾಗುತ್ತದೆ. ಕೇರಳದಲ್ಲಿ ಪಲಸು ಎಂದು ಕರೆಯಲ್ಪಡುವ ಈ ಹೂವು ಅಗ್ನಿ ಪೂಜೆಗಳಲ್ಲಿ ವಿಶೇಷವಾಗಿ ಬಳಸಲಾಗುತ್ತದೆ. 

ಮತ್ತುಗದ ಉಪಯೋಗಗಳು:

ಮತ್ತುಗ ಹಲವಾರು ವಿಧಗಳಲ್ಲಿ ಉಪಯೋಗಿಸಬಹುದು. ಮರದ ರೂಪದಲ್ಲಿ, ಅಂಟಿನ ರೂಪದಲ್ಲಿ, ಬಣ್ಣದ ರೂಪದಲ್ಲಿ, ಮೇವಿನ ರೂಪದಲ್ಲಿ ಹೀಗೆ ಹತ್ತು ಹಲವಾರು ವಿಧಗಳಲ್ಲಿ.

ಆಯುರ್ವೇದದಲ್ಲಿ ಮತ್ತುಗ:

ಆಯುರ್ವೇದದಲ್ಲಿ ಮತ್ತುಗದ ಹೂವು, ಬೀಜ, ಅಂಟು ಮತ್ತು ಎಲೆಗಳನ್ನು ಬಳಸಿ ಔಷಧಿಗಳನ್ನು ತಯಾರಿಸಾಲಾಗುತ್ತದೆ. ಹೂವುಗಳಲ್ಲಿ  glucosides, butin, neteroside ಮತ್ತು butrin ಅಂಶ ಜಾಸ್ತಿ ಇದ್ದರೆ, ಬೀಜಗಳಲ್ಲಿ moodooga oil ಅಥವಾ kino-tree oil ಅಂಶ ಜಾಸ್ತಿ ಇದ್ದು, ಹಳದಿ ಬಣ್ಣದ ಎಣ್ಣೆ ಇದಾಗಿರುತ್ತದೆ. ಈ ಎಣ್ಣೆಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ಮರದಿಂದ ಬರುವ ಅಂಟಿನಲ್ಲಿ gallic acid ಮತ್ತು tannic acid ಜಾಸ್ತಿ ಇದ್ದಿರುತ್ತದೆ. ಇದರ ಎಲೆಗಳನ್ನು ಟಾನಿಕ್ ಮತ್ತು ಕಾಮೋತ್ತೇಜಕಗಳ ಉತ್ಪಾದನೆಗೆ ಬಳಸುತ್ತಾರೆ. ಇದಲ್ಲದೆ ರಕ್ತ ಹೆಪ್ಪುಗಟ್ಟುವಿಕೆಗೆ ಮತ್ತುಗದ ಎಲೆಗಳು ಉಪಯೋಗಿಸಲ್ಪಡುತ್ತವೆ. 

ಮತ್ತುಗ ಮರದ ಉಪಯೋಗಗಳು ಮೇಲಿನಂತಾದರೆ, ಮಾನವ ಶರೀರದ ಸಮಸ್ಯೆಗಳಿಗನುಗುಣವಾಗಿ ಯಾವ ಉಪಯೋಗ ಎಂಬುದು ಕೆಳಗಿನಂತಿದೆ: 
೧. ಅತಿಸಾರ ಮತ್ತು ಬೇದಿ 
೨. ಹೊಟ್ಟೆಹುಳು 
೩. ಸಕ್ಕರೆ ಕಾಯಿಲೆ 
೪. ಗಂಟಲು ನೋವು
೫. ಚರ್ಮ ರೋಗ 
೬. ಬಿಳಿಸೆರಗು 
೭. ಜಲಸಂಚಯನ 

ಆಯುರ್ವೇದೀಯವಾಗಿ ಮತ್ತುಗ ಎಷ್ಟೇ ಸಹಾಯಕವಾದ ಔಷದಿಯಾದರೂ ಕೂಡ, ವೈದ್ಯರ ಸಲಹೆಯಿಲ್ಲದೆ ತೆಗೆದುಕೊಳ್ಳುವಂತಿಲ್ಲ. ಸೂಕ್ತ ಮಾಹಿತಿ ಮತ್ತು ಪ್ರಮಾಣಕ್ಕಾಗಿ ಆಯುರ್ವೇದೀಯ ವೈದ್ಯರ ಸಲಹೆ ಅತ್ಯಗತ್ಯ. 

 ಮತ್ತುಗ ಮೈ ತುಂಬಿದರೆ ಎಲ್ಲೆಲ್ಲೂ ರಕ್ತ ವರ್ಣ. ಸೃಷ್ಟಿ ದೇವೆತೆಗೆ ಸಿರಿಯುಡಿಸಿದ ಭಾವ. "ಕೆಂಪಾದವೋ ಎಲ್ಲ ಕೆಂಪಾದವೋ ... " ಎಂಬ ಕವಿ ವಾಣಿ ಮನ ತುಂಬುತ್ತದೆ. ಎಷ್ಟೇ ಸೌಂದರ್ಯವಿರಲಿ, ಔಷದೀಯ ಗುಣಗಳಿರುವ ಮರಗಳಿರಲಿ, ಭಾರತದಲ್ಲಿ ಮತ್ತು ಭಾರತೀಯ ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಮಟ್ಟುಗದಂತಹ ನೂರಾರು ಗಿಡ ಮರಗಳು ವಿನಾಶದಂಚಿನಲ್ಲಿವೆ. ಪರಿಸರ ಪ್ರೀತಿ ಮತ್ತು ಪರಿಸರ ಬೆಳೆಸುವ ಅರಿವು-ಉದ್ದೇಶ ನಮ್ಮ ಸಾಮಾನ್ಯ ಜನರಲ್ಲಿ ಮೂಡಬೇಕಿದೆ. ಇದರಿಂದಾಗಿ ಮತ್ತುಗದಂತಹ ಹಲವಾರು ವಿನಾಶದಂಚಿನ ಸಸ್ಯ ಸಂಕುಲವನ್ನು ಉಳಿಸಿಕೊಳ್ಳಬಹುದು. 

This article was published in TimesKannada news paper

Monday, September 19, 2016

ನಶಿಸಿ ಹೊಯ್ತು ಕರ್ನಾಟಕದ "ಬಳೆಗಾರ ಚೆನ್ನಯ್ಯ" ಸಂಸ್ಕೃತಿ...



ಕರ್ನಾಟಕ, ಹಲವಾರು ಭಾರತೀಯ ಸಂಸ್ಕೃತಿಗಳನ್ನು ಕಾಪಾಡಿಕೊಂಡು ಬಂದಂತಹ ರಾಜ್ಯಗಳಲ್ಲಿ ಒಂದು. ಅವುಗಳಲ್ಲಿ ರಂಗೋಲಿ ಇಡುವುದು, ಮಹಿಳೆಯರ ಮೂಗುತಿ, ಯಕ್ಷಗಾನ, ಕೋಲಾಟ ಮುಂತಾದವುಗಳು ಮುಖ್ಯವಾದವುಗಳು. ಮದುವೆ-ಮುಂಜಿಗಳು ಬಂದರೆ ಬಳೆ ಇಡುವುದು ನಮ್ಮ ಹೆಮ್ಮೆಯ ಸಂಸ್ಕೃತಿ ಕೂಡ. ಇತ್ತೀಚಿನ ದಿನಗಳಲ್ಲಿ ಆಧುನಿಕತೆಯಿಂದಾಗಿ ಮಹಿಳೆಯರು ಪಟ್ಟಣಕ್ಕೆ ಹೋಗಿ ಬಳೆ ಇಟ್ಟು ಬಂದರೂ, ಹಿಂದಿನ "ಬಳೆಗಾರ" ಸಂಸ್ಕೃತಿ ಮರೆಯಲು ಸಾಧ್ಯವೇ? ಮಹಿಳೆಯರೇ ಹಾಗೆ. ಆಭರಣ ಪ್ರಿಯರು. ಇದು ಇಂದು-ನಿನ್ನೆಯದಲ್ಲ. ಅನಾದಿಕಾಲದಿಂದಲೂ ಆಕೆ ಸರ್ವಾಭರಣ ಭೂಷಿತೆ. ಈಗ ಕಾಲ ಬದಲಾಗಿದೆ, ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯವಿದೆ. ಆಕೆ ತನಗೆ ಬೇಕಾದ್ದನ್ನು ಪಟ್ಟಣಕ್ಕೆ ಹೋಗಿ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾಳೆ. ಆದರೆ ಹಿಂದಿನ ಕಾಲ ಹೀಗಿರಲಿಲ್ಲ. ಹಳ್ಳಿಯ ಮಹಿಳೆಯರಿಗೆ ಮನೆಯಿಂದ ಹೊರ ಬರುಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಅಂತಹ ಕಾಲದಲ್ಲಿ ಬಳೆಗಾರ ಸಂಸ್ಕೃತಿ ಹೆಚ್ಚು ಪ್ರಚಲಿತವಾಗಿತ್ತು. 

ಈ "ಬಳೆಗಾರ"ರಿಗೆ ಸಮಾಜದಲ್ಲಿ ವಿಶೇಷ ಸ್ಥಾನವಿದ್ದಿತ್ತು. ಬಳೆಯನ್ನು ಹೊತ್ತು ಊರೂರು ತಿರುಗುವುದು ಇವರ ಉದ್ಯೋಗ. ಹೆಚ್ಚಿನ ಬಳೆಗಾರರಿಗೆ ಜೀವನಾಂಶ ಕೂಡ  ಇದೇ ಆಗಿರುತ್ತಿತ್ತು. ಆಗಿನ ಕಾಲದಲ್ಲಿ ಸಾಮಾನ್ಯವಾಗಿ ಇದು ವಂಶಪಾರಂಪರ್ಯವಾಗಿ ಮುಂದುವರೆಲ್ಪಡುತ್ತಿತ್ತು. ಮನುಷ್ಯರಿಗೆ, ಮಾನವೀಯತೆಗೆ ಬೆಲೆ ಕೊಡುತ್ತಿದ್ದ ಕಾಲವದು. ಹೀಗಾಗಿ ಒಬ್ಬ ಬಳೆಗಾರ ಒಮ್ಮೆ ಬಳೆ ಮಾರಲು ಹೊರಟರೆ, ಅವನು ಪುನಃ ಮನೆಗೆ ವಾಪಸಾಗಲು ಹಲವಾರು ದಿನಗಳಾಗುತ್ತಿದ್ದವು. ಅಲ್ಲಿಯವರೆಗೂ ಮನೆ ಮನೆಗೆ ತಿರುಗುವ ಬಳೆಗಾರರಿಗೆ, ಊಟ ಒಬ್ಬರ ಮನೆಯೊಡತಿ ನೀಡಿದರೆ, ವಸತಿ ಇನ್ನೊಂದು ಮನೆಯೊಡೆಯ ನೀಡುತ್ತಿದ್ದರು. ಇದೊಂದು ಸಂಸ್ಕೃತಿಯೊಂದೇ ಅಲ್ಲದೆ, ಸೌಹಾರ್ದ ಮತ್ತು ಮಾನವೀಯ ಸಮಾಜದ ಉದಾಹರಣೆಯನ್ನು ಎತ್ತಿ ತೋರುತ್ತದೆ. 

ಇವಿಷ್ಟೂ ಬಳೆಗಾರರ ಬಗ್ಗೆಯಾದರೆ, ಬಳೆಗಾರರ ದಿನಚರಿ ಹೇಗಿರುತ್ತಿತ್ತು? ಬೆಳಿಗ್ಗೆ ಎದ್ದು ಮನೆಯಲ್ಲಿ ತಿಂಡಿ ಮುಗಿಸಿ, ಭಾರದ ಬಳೆ ಗಂಟನ್ನು ಎತ್ತಿ ಹೊರಡುವ ಬಳೆಗಾರರು ಪ್ರತಿಯೊಂದು ಮನೆ ಎದುರು ನಿಂತು "ಅಮ್ಮಾ ಬಳೆ ಬೇಕಾ" ಎನ್ನುತ್ತಿದ್ದಿದು ಪದ್ದತಿ. ಹಿಂದಿನ ಕಾಲದಲ್ಲಿ ಸಂಚಾರಿ ವ್ಯವಸ್ಥೆ ಇಲ್ಲವಾಗಿರುತ್ತಿದ್ದರಿಂದ ಸಾಮಾನ್ಯವಾಗಿ ಎಲ್ಲಾ ಮನೆಯ ಹೆಣ್ಣು ಮಕ್ಕಳು ಬಳೆ ಕೊಳ್ಳುತ್ತಿದ್ದರು. ಕೆಲ ಬಳೆಗಾರರು ಬರೀ ಬಳೆಯೊಂದೇ ಅಲ್ಲದೆ ಅದರ ಜೊತೆ ಮಕ್ಕಳ ಆಟಿಕೆ, ಸರ, ಕಿವಿಯೋಲೆ, ತಲೆಗೆ ಹಾಕುವ ಕ್ಲಿಪ್, ಪಟ್ಟಿ ಹೀಗೆ ವಿಧ ವಿಧ ವಸ್ತುಗಳನ್ನು ಹೊತ್ತು ಬರುತ್ತಿದ್ದರು. ಬಳೆಗಾರ ಬಂದರೆ ಮಕ್ಕಳಿಗಂತೂ ಸಂಭ್ರಮವೋ ಸಂಭ್ರಮ. ಅದೂ ಅಪ್ಪ ಇಲ್ಲದ ಸಮಯದಲ್ಲಿ ಬಳೆಗಾರ ಬಂದರೆ ಸ್ವರ್ಗ. ಯಾಕೆಂದರೆ ಅಮ್ಮ ಕೂಡಿಟ್ಟ ಅಲ್ಪ ಸ್ವಲ್ಪ ದುಡ್ಡಿಂದ ಕಂಡದ್ದೆಲ್ಲ ಹಠ ಬಿದ್ದು ಕೊಡಿಸಿಕೊಳ್ಳಬಹುದಲ್ಲ. ಮನೆಗೆ ಬಂದ ಬಳೆಗಾರನಿಗೆ ದಣಿವಾರಿಸಿಕೊಳ್ಳಲು ಪಾನೀಯ ಕೊಟ್ಟ ಮನೆಯೊಡತಿ ಬಳೆ ನೋಡಲು ಕೂರುತ್ತಿದ್ದಳು. ತನಗಿಷ್ಟವಾದ ಬಳೆ ಮತ್ತು ಮಕ್ಕಳಿಗೆ ಬೇಕಾದ್ದು ತೆಗೆದುಕೊಂಡ ನಂತರ ಹಣ ನೀಡಿ, ಬಳೆಗೆ ಅರಿಶಿನ-ಕುಂಕುಮ ಹಾಕಿ ನಮಸ್ಕರಿಸಿ ಕಳಿಸುವುದು ನಮ್ಮ ಸಂಸ್ಕೃತಿ. ಯಾಕೆಂದರೆ ನಾವು ನಿಸರ್ಗವನ್ನು ವಿವಿಧ ರೀತಿಯಲ್ಲಿ ಪೂಜಿಸುತ್ತೇವಲ್ಲವೇ? 

ಇದಲ್ಲದೇ, ಸಾಮಾನ್ಯವಾಗಿ ಮದುವೆ-ಮುಂಜಿಯ ಹಿಂದಿನ ದಿನ ಬಳೆಗಾರರನ್ನು ಕರೆಸುವ ಪದ್ದತಿ ನಮ್ಮಲ್ಲಿತ್ತು. ಕೆಲವೊಮ್ಮೆ ಮನೆಯೊಡೆಯನಿಗೇ ಕರೆಸಲಾಗದಿದ್ದರೂ, ಬಳೆಗಾರರೇ ಸೀಮೆಯಲ್ಲಿ ಕಾರ್ಯಕ್ರಮವಿದೆ ಎಂದು ತಿಳಿದಾಗ ಬರುತ್ತಿದ್ದರು. ಅದೊಂದು ನಮ್ಮ ಹೆಮ್ಮೆಯ ಸಂಸ್ಕೃತಿ. ಸಾಮಾನ್ಯವಾಗಿ ಕಾರ್ಯಕ್ರಮಗಳಿಗೆ ತವರಿಗೆ ಬರುತ್ತಿದ್ದ ಹೆಣ್ಣು ಮಕ್ಕಳಿಗೆ ಕೈ ತುಂಬಾ ಬಳೆ ಇಡಿಸುವುದು ಕ್ರಮ. ಆ ಹಬ್ಬದ ವಾತಾವರಣದಲ್ಲಿ ಬಳೆಗಾರನ ಸುತ್ತ ಕುಳಿತ ಹೆಣ್ಣು ಮಕ್ಕಳನ್ನು ನೋಡುವುದೇ ಒಂದು ರೀತಿಯ ಸಂಭ್ರಮ. ಇನ್ನು ಬಳೆಗಾರರಿಗಂತೂ ಭರ್ಜರಿ ವ್ಯಾಪಾರದ ಜೊತೆ, ಹೊಟ್ಟೆ ತುಂಬಾ ವಿಶೇಷದೂಟ. 

ಆಧುನಿಕತೆಗೆ ತಕ್ಕಂತೆ ನಾವು-ನೀವೆಲ್ಲರೂ ನಮ್ಮ ವಂಶಪಾರಂಪರ್ಯವಾಗಿ ಬಂದಂತಹ ಉದ್ಯೋಗಗಳನ್ನು ಬಿಟ್ಟು, ಪಟ್ಟಣಕ್ಕೆ ವಲಸೆ ಬಂದಿದ್ದೇವೆ.  ಮಾನವೀಯತೆ, ಸೌಹಾರ್ದತೆಗಳು ಸಮಾಜದಲ್ಲಿ ಮರೆಯಾಗುತ್ತಿವೆ. ಹಾಗೆಯೇ ಬಳೆಗಾರರು ಕೂಡ ಮರೆಯಾಗಿದ್ದಾರೆ. ನಮ್ಮ ತಲೆಮಾರಿನವರು ಅವರ ಬಗ್ಗೆ ಕಂಡಿದ್ದೇವೆ, ಕೇಳಿದ್ದೇವೆ. ನಮ್ಮ ಮಕ್ಕಳಿಗೆ ಖಂಡಿತಾ ಇದರ ಬಗ್ಗೆ ಗೊತ್ತಿರಲೂ ಸಾಧ್ಯವಿಲ್ಲ. ನಮ್ಮ ಹಲವಾರು ಜಾನಪದ ಗೀತೆಗಳಲ್ಲಿ ಬಳೆಗಾರರ ಬಗ್ಗೆ ಉಲ್ಲೇಖವಿದೆ. ಹಲವಾರು ಜಾನಪದ ಕಥೆಗಳಲ್ಲಿ ಬಳೆಗಾರ ಕಥಾ ನಾಯಕನಾಗಿದ್ದಾನೆ. ಮುಂದಿನ ಪೀಳಿಗೆಗೆ ನಾವು ಇಂತಹ ಸಂಸ್ಕೃತಿಯ ಬಗ್ಗೆ ಹಾಡು, ಕಥೆಗಳಲ್ಲಷ್ಟೇ ತಿಳಿಸಲು ಸಾಧ್ಯ. ಇಂತಹ ಹಲವಾರು ನಮ್ಮ ಹೆಮ್ಮೆಯ ಸಂಸ್ಕೃತಿಗಳನ್ನು ನಾವು ಕಳೆದುಕೊಳ್ಳುತ್ತಿರುವುದು ನಮ್ಮೆಲ್ಲರ ವಿಪರ್ಯಾಸ.  

This article was published in TimesKannada news paper http://timeskannada.com/?p=6061


This Article was also published in Malenadu Mitra news paper